ಕಾಡುಪ್ರಾಣಿ ದಾಳಿ: ಪರಿಹಾರ ಧನ ಹೆಚ್ಚಿಸಿದ ಸರಕಾರ
ವನ್ಯಜೀವಿ ದಾಳಿಯಿಂದ ಮೃತನಾದ ಕುಟುಂಬಕ್ಕೆ ಈ ಹಿಂದೆ 2 ಲಕ್ಷ ರು. ಪರಿಹಾರ ನೀಡಲಾಗುತ್ತಿತ್ತು. ಪ್ರಸಕ್ತ ವರ್ಷದ ಏಪ್ರಿಲ್ 30ರಿಂದ ಅನ್ವಯವಾಗುವಂತೆ ಇದನ್ನು 3.50 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಆದರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವಾಗ ಅಥವಾ ನಿರ್ಬಂಧಿತ ಪ್ರದೇಶಗಳಲ್ಲಿ ಕಾಡುಪ್ರಾಣಿಗಳಿಂದ ಸಾವಿಗೀಡಾದರೆ ಪರಿಹಾರ ಧನವನ್ನು ನೀಡಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೃತ ವ್ಯಕ್ತಿಯ ಪೋಸ್ಟ್ ಮಾರ್ಟಂ ನಡೆಸಿದ ವೈದ್ಯರು ವನ್ಯಜೀವಿಯಿಂದ ಸಾವನ್ನಪಿರುವುದನ್ನು ರುಜುವಾತುಪಡಿಸಬೇಕು. ನಂತರ ಸಂಬಂಧಿತ ಅರಣ್ಯ ಇಲಾಖೆ ಸಾಕಷ್ಟು ತನಿಖೆ ನಡೆಸಿ ಪರಿಹಾರ ಧನ ನೀಡಲಿದೆ. ಕಾಡು ಪ್ರಾಣಿಯಿಂದ ಮೃತನಾದ ತಕ್ಷಣದ ಪರಿಹಾರವಾಗಿ ಒಂದುವರೆ ಲಕ್ಷ ನೀಡಲಾಗುತ್ತದೆ. ತನಿಖೆ ಪೂರ್ತಿಯಾದ ನಂತರ ಬಾಕಿ ಪರಿಹಾರ ನೀಡಲಾಗುವುದು ಎಂದು ಅರಣ್ಯ ಇಲಾಖೆ ಹೇಳಿದೆ.
ಕಾಡುಪ್ರಾಣಿ ದಾಳಿಯಿಂದ ಶಾಶ್ವತ ಅಂಗವೈಕಲ್ಯಕೀಡಾದರೆ 50 ಸಾವಿರ ರು. ಪರಿಹಾರ ದೊರಕಿದೆ. ಶಾಶ್ವತ ಅಂಗವೈಕಲ್ಯತೆಯನ್ನು ಜಿಲ್ಲಾ ಸರ್ಜನ್ ಅಥವಾ ಜಿಲ್ಲಾ ಮಟ್ಟದ ವೈದ್ಯಕೀಯ ಅಧಿಕಾರಿ ಖಚಿತಪಡಿಸಬೇಕು. ಇದರೊಂದಿಗೆ ಕಾಡು ಪ್ರಾಣಿಗಳ ದಾಳಿಯಿಂದ ಗಾಯಗೊಂಡವರು 5 ಸಾವಿರ ರು.ನಿಂದ 20 ಸಾವಿರ ರು.ವರೆಗೆ ಪರಿಹಾರ ಪಡೆಯಲಿದ್ದಾರೆ.
ವನ್ಯಜೀವಿ ದಾಳಿಯಿಂದ ಉಂಟಾದ ಕೃಷಿ ದಾಳಿಗೂ ಪರಿಹಾರ ಹೆಚ್ಚಿಸಲಾಗಿದೆ. 7,500 ರೂ.ನಿಂದ 35 ಸಾವಿರ ರು. ವರೆಗೆ ನಷ್ಟವಾದರೆ ಕೃಷಿಕನಿಗೆ ಗರಿಷ್ಠ 21,250 ರೂಪಾಯಿ ಪರಿಹಾರ ನೀಡಲಾಗುತ್ತದೆ. 35 ಸಾವಿರ ರು.ಗಿಂತ ಹೆಚ್ಚು ನಷ್ಟವಾದರೆ 21.250 ರು.ನಿಂದ 50 ಸಾವಿರ ರು.ವರೆಗೆ ಪರಿಹಾರ ನೀಡಲಾಗುವುದೆಂದು ಪ್ರಕಟಣೆ ತಿಳಿಸಿದೆ.