ನಾಡಗೀತೆಯಲ್ಲಿ ದೋಷ: ಪಾಟೀಲ ಪುಟ್ಟಪ್ಪ ತಕರಾರು
ನಾಡಗೀತೆಯಲ್ಲಿ ಹಲವು ಲೋಪದೋಷಗಳಿವೆ ಎಂದು ಹೇಳತೊಡಗಿದ ಪಾಪು, ಹಲವು ವ್ಯತ್ಯಯಗಳನ್ನು ಬಿಡಿಸಿಟ್ಟರು. 'ತೈಲಪ ಹೊಯ್ಸಳರಾಳಿದ ನಾಡೆ' ಎಂದು ಹೇಳಲಾಗಿದೆ. ಆದರೆ, ತೈಲಪ ಹೊಯ್ಸಳರು ಸಾಮಾನ್ಯ ದೊರೆಗಳು. ವಿಜಯನಗರದ ದೊರೆ, ರಾಷ್ಟ್ರಕೂಟರು, ಚಾಲುಕ್ಯರಂತಹ ದೊರೆಗಳ ಹೆಸರು ಎಲ್ಲಿದೆ? ನದಿ, ವನಗಳ ನಾಡೆ ಎಂದು ಬರೆದಿದ್ದಾರೆ. ನದಿ, ವನಗಳು ಕೇವಲ ಕರ್ನಾಟಕದಲ್ಲಷ್ಟೇ ಇಲ್ಲ. ಬೇರೆ ರಾಜ್ಯಗಳಲ್ಲೂ ಇವೆ. 'ಜನಕನ ಹೋಲುವ ದೊರೆಗಳ ಧಾಮ' ಎಂದೂ ಪದ್ಯದಲ್ಲಿ ಬಣ್ಣಿಸಲಾಗಿದೆ. ಜನಕನನ್ನು ಹೋಲುವ ದೊರೆಗಳು ಯಾರಿದ್ದಾರೆ.
ಅಷ್ಟಕ್ಕೂ ಕುವೆಂಪು ಈ ಪದ್ಯವನ್ನು ಬರೆಯುವ ವೇಳೆ 24 ವರ್ಷದವರಾಗಿದ್ದರು. ಅವರು ಈ ವಯಸ್ಸಿನಲ್ಲಿ ಬರೆದ ಪದ್ಯದಲ್ಲಿ ಎಲ್ಲೂ ಗಾಂಧೀಜಿ ಹೆಸರಿಲ್ಲ. ಮಹಾತ್ಮ ಗಾಂಧಿಯವರ ಹೆಸರಿಲ್ಲದ ನಾಡಗೀತೆಯನ್ನು ತಾವು ಒಪ್ಪುವುದಿಲ್ಲ. 7 ನಿಮಿಷದ ಈ ಹಾಡನ್ನು ಸಂಗೀತ ನುಡಿಸಿ, ಅನವಶ್ಯಕವಾಗಿ ಎಳೆಯಲಾಗುತ್ತದೆ ಎಂದೂ ನಾಡೋಜ ಪಾಟೀಲ ಪುಟ್ಟಪ್ಪ ಗುಡುಗಿದ್ದಾರೆ. ಸೋಜಿಗವೆಂದರೆ ನಮ್ಮ ನಾಡಗೀತೆ ಆಗಾಗ ವಿವಾದದ ಬಿರುಗಾಳಿಯನ್ನು ಎಬ್ಬಿಸುತ್ತಲೇ ಇದೆ.