ಮಾತಿನ ಪ್ರಜ್ಞೆ ಕಳೆದುಕೊಂಡ ಸಿಎಂ ಬಿಎಸ್ ವೈ
ರಾಜ್ಯದ ಹೆಮ್ಮೆಯ ಕ್ರೀಡಾಪಟುಗಳಿಗೆ ಇನ್ನೂ ನಿವೇಶನ ಹಂಚಲು ಮುಂದಾಗದ ಕರ್ನಾಟಕ ಸರ್ಕಾರ, ಏಕಾಏಕಿ ಕ್ರಿಕೆಟ್ಟಿಗರಿಗೆ ಮಣೆ ಹಾಕಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಯಡಿಯೂರಪ್ಪ ಅವರು ಸ್ವಂತ ಖರ್ಚಿನಿಂದ ಆಟಗಾರರಿಗೆ ನಿವೇಶನ ನೀಡಿದರೆ ಯಾರು ಕೇಳುತ್ತಿರಲಿಲ್ಲ. ಆದರೆ, ಯಡಿಯೂರಪ್ಪ ಅವರು ತಮ್ಮ ಅಧಿಕಾರ ವ್ಯಾಪ್ತಿಗೆ ಒಳಪಡದಿದ್ದರೂ, ಬಾಯಿಗೆ ಬಂದಂತೆ ಹೇಳಿಕೆ ನೀಡುವ ಮೂಲಕ ತಲೆ ತಗ್ಗಿಸುವಂಥ ಕೆಲಸ ಮಾಡಿಕೊಂಡಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಒಂದು ಸ್ವಾಯುತ್ತ ಸಂಸ್ಥೆಯಾಗಿರುವುದರಿಂದ ಯಡಿಯೂರಪ್ಪ ಅವರಿಗೆ ಬಿಡಿಎಗೆ ನಿರ್ದೇಶನ ಮಾಡಲು ಯಾವುದೇ ಹಕ್ಕಿಲ್ಲ. ಆದರೆ, ಮನವಿ ಸಲ್ಲಿಸಬಹುದು. ಈಗಾಗಲೇ ಭೂ ಹಗರಣಗಳಲ್ಲಿ ಸಿಲುಕಿರುವ ಯಡಿಯೂರಪ್ಪ ಅವರು ಬಿಡಿಎ ಸೈಟು ನೀಡಿದರೆ ಆರೋಪದಿಂದ ಮುಕ್ತರಾಗುತ್ತಾರೆಯೇ ಎಂದು ಪ್ರತಿಪಕ್ಷಗಳು ಟೀಕಿಸಿದ್ದವು.
ಅಂತೂ ಕೊನೆಗೆ, ಮುಖಭಂಗ ಅನುಭವಿಸಿರುವ ಯಡಿಯೂರಪ್ಪ 50X80 ಸೈಟು ವಿತರಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದು, ಆಟಗಾರರಿಗೆ ನಗದು ಹಣ ನೀಡಿ ಸನ್ಮಾನಿಸುವುದಾಗಿ ಹೇಳಿದ್ದಾರೆ. ಐಪಿಎಲ್ ನಲ್ಲಿ ಬ್ಯುಸಿಯಾಗಿರುವ ಕ್ರಿಕೆಟಿಗರು ಕರ್ನಾಟಕ ಸರ್ಕಾರದ ಬಳಿ ಬರಲು ಕನಿಷ್ಠ 2 ತಿಂಗಳು ಹಿಡಿದರು ಆಶ್ಚರ್ಯವೇನಿಲ್ಲ. ಏನಾದರೂ ಯಡಿಯೂರಪ್ಪ ಅವರು ಮಾತಿನ ಮೇಲೆ ಹಿಡಿತ ತಪ್ಪಬಾರದಿತ್ತು.