ಶಿವಾಜಿ ಕಾಲದ ಖಡ್ಗ ಉರ್ವ ಡಾಕ್ಟರ್ ಬಳಿ ಪತ್ತೆ
ನಿವೃತ್ತ ವೈದ್ಯ ಬಿಎನ್ ಗಡಿಯಾರ್ ಎಂಬವರ ಮನೆಯಲ್ಲಿ ಪತ್ತೆಯಾಗಿರುವ ಸೊತ್ತುಗಳ ಒಟ್ಟು ಮೌಲ್ಯ ನಾಲ್ಕು ಕೋಟಿ ಎಂದು ಅಂದಾಜಿಸಲಾಗಿದೆ. ಇವುಗಳಲ್ಲಿ 180 ಕೆ.ಜಿ ತೂಕದ ನಟರಾಜನ ಲೋಹದ ವಿಗ್ರಹ, ಚಿನ್ನದ ಹಿಡಿ ಇರುವ ಎರಡು ಖಡ್ಗಗಳು ಶಿವಾಜಿ ಕಾಲದ್ದು ಎಂದು ಅಂದಾಜಿಸಲಾಗಿದೆ ಮತ್ತು ಆರು ಚಿನ್ನದ ನಾಣ್ಯಗಳು ಸೇರಿವೆ. ತನ್ನ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಈ ಸೊತ್ತುಗಳನ್ನು ಗಡಿಯಾರ್ ಅವರು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದರು. ನಗರದಲ್ಲಿ ಮಕ್ಕಳ ವೈದ್ಯರಾಗಿದ್ದ ಗಡಿಯಾರ್ ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿದ್ದಾರೆ.
ಇವರ ಇಬ್ಬರು ಮಕ್ಕಳು ವೈದ್ಯರಾಗಿದ್ದು ಲಂಡನ್ ಹಾಗೂ ಮುಂಬೈನಲ್ಲಿ ನೆಲೆಸಿದ್ದಾರೆ. 81 ವರ್ಷದ ಗಡಿಯಾರ್ ಅವರು, ಈ ಸೊತ್ತುಗಳು ಇನ್ನೂ ತನ್ನ ಮನೆಯಲ್ಲಿ ಇದ್ದರೆ ಕಳ್ಳರ ಪಾಲಾದಿತು ಎಂದು ತಿಳಿದು ಅದನ್ನು ಮಾರಲು ಯತ್ನಿಸಿದ್ದರು ಆದರೆ ಅದರ ಮೌಲ್ಯ ಮಾತ್ರ ಅವರಿಗೆ ತಿಳಿದಿರಲಿಲ್ಲ. ಈ ನಡುವೆ ಇವರು ವಿಗ್ರಹ ಮಾರಲು ಯತ್ನಿಸುತ್ತಿರುವ ವಿಚಾರ ಪೊಲೀಸರಿಗೆ ತಲುಪಿದೆ.
ಕೇಸ್ ದಾಖಲಿಸಿಲ್ಲ: ವೈದ್ಯರ ಮನೆಯ ವಸ್ತುಗಳ ಮುಟ್ಟುಗೋಲು ಹಾಕಿಕೊಂಡ ನಂತರ ಮಾತನಾಡಿದ ಮಂಗಳೂರು ಪೊಲೀಸ್ ಇನ್ಸ್ ಪೆಕ್ಟರ್ ಸುರೇಶ್, ವೈದ್ಯ ಗಡಿಯಾರ್ ಅವರ ಮೇಲೇ ಯಾವುದೇ ಪೂರ್ವ ಕ್ರಿಮಿನಲ್ ಆರೋಪಗಳಿಲ್ಲ. ಹಣ ಮಾಡುವ ಉದ್ದೇಶದಿಂದ ವಿಗ್ರಹ ಮಾರಾಟಕ್ಕೆ ಇಳಿದಿಲ್ಲ ಹಾಗಾಗಿ ಯಾವುದೇ ದೂರನ್ನು ದಾಖಲಿಸಿಲ್ಲ. ಎಲ್ಲಾ ಸೊತ್ತುಗಳ ನಿಖರ ಮೌಲ್ಯ ತಿಳಿಯಲು ಭಾರತೀಯ ಪುರಾತತ್ವ ಇಲಾಖೆಗೆ ಕಳುಹಿಸಿ ಕೊಡಲಾಗಿದೆ. ರಾಜಮುದ್ರೆಯಿರುವ ವಿಗ್ರಹದ ಮೌಲ್ಯ ಸುಮಾರು 3 ಕೋಟಿ, ಖಡ್ಗಗಳ ಮೌಲ್ಯ 75ಲಕ್ಷ ಹಾಗೂ 6 1879ರ ಕಾಲದ ಚಿನ್ನದ ನಾಣ್ಯಗಳ ಮೊತ್ತ ಐದು ಲಕ್ಷ ರು ಎಂದು ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ.