ಐಸ್ ಕ್ರೀಂಗೆ ಕರಗುತ್ತಿದ್ದರು ಸ್ವಾಮಿ, ವಿವೇಕಾನಂದರು!
ಭೂರಿ ಭೋಜನ ಬಯಸದೆ ಸಾತ್ವಿಕ ಆಹಾರಕ್ಕೆ ಶರಣಾಗುತ್ತಿದ್ದ ವಿವೇಕಾನಂದರನ್ನು ಹೆಚ್ಚು ಹೊತ್ತು ಡೈನಿಂಗ್ ಟೇಬಲ್ ಮುಂದೆ ಕೂಡಿಸುವ ತಂತ್ರ ಕಂಡುಕೊಂಡಿದ್ದರು. 'ಮಹಾ ಸ್ವಾಮಿ, ಇನ್ನೇನು ಕೆಲವೇ ಕ್ಷಣಗಳಲ್ಲಿ ಐಸ್ ಕ್ರೀಂ ಸರ್ವ್ ಮಾಡುವವರಿದ್ದೇವೆ. ದಯವಿಟ್ಟು ಸ್ವೀಕರಿಸಿ' ಎಂದು ಅಮೆರಿಕ ಮಿತ್ರರು ಘೋಷಿಸುತ್ತಿದ್ದಂತೆ ವಿವೇಕಾನಂದರು ಗಪ್ ಚುಪ್ ಆಗುತ್ತಿದ್ದರು. ಐಸ್ ಕ್ರೀಂ ತಟ್ಟೆಗೆ ಬರುತ್ತಿದ್ದಂತೆ ಚಿಕ್ಕಮಕ್ಕಳಂತೆ ಅದನ್ನು ಮೆಲ್ಲುತ್ತಿದ್ದರು.
ಪ್ರವಚನದ ಬಳಿಕ ವಿವೇಕಾನಂದರ ಶಿಷ್ಯರು ಅವರನ್ನು ರೆಸ್ಟೋರೆಂಟ್ ಗೆ ಕರೆದುಕೊಂಡು ಹೋಗುವ ಪರಿಪಾಠ ಬೆಳೆಸಿಕೊಂಡಿದ್ದರು. ಒಮ್ಮೆ ರೈನ್ ಕೋಟ್ ಧರಿಸಿದ್ದರೂ ಚಳಿಗೆ ಥರಗುಟ್ಟುತ್ತಿದ್ದ ವಿವೇಕಾನಂದರು ಕೂಲ್ ಆಗಿ ಐಸ್ ಕ್ರೀಂಗೆ ಆರ್ಡರ್ ಮಾಡಿದ್ದರು. ಶಿಷ್ಯರ ಮಧ್ಯೆ ಐಸ್ ಕ್ರೀಂ ಸವಿದಿದ್ದರು. ಮತ್ತೊಂದು ಪ್ರಸಂಗದಲ್ಲಿ, ಸ್ನೇಹಿತರೊಡಗೂಡಿ ಪ್ರವಚನದ ಬಳಿಕ ಸೀದಾ ಕೆಫೆಗೆ ಹೋದವರೆ ಐಸ್ ಕ್ರೀಂ ಮೆಲ್ಲತೊಡಗಿದರು. ಬಳಿಕ 'ದೇವಾನುದೇವತೆಗಳ ಅಮೃತಪಾನವಿದು' ಎಂದು ಕೊಸರು ಸೇರಿಸಿ, ಅದರ ಸವಿಯನ್ನು ಹೆಚ್ಚಿಸಿದರು.
ಅಂದಹಾಗೆ, ಇದನ್ನೆಲ್ಲಾ ವಿವೇಕಾನಂದ ಪ್ರಿಯರಿಗೆ ಈಗ ಉಣಬಡಿಸಿರುವವರು ಪಶ್ಚಿಮ ಬಂಗಾಳದ ಖ್ಯಾತ ಸಮಕಾಲೀನ ಬರಹಗಾರ ಮಣಿಶಂಕರ ಮುಖರ್ಜಿ. 'ದಿ ಮಾಂಕ್ ಅಸ್ ಮ್ಯಾನ್: ದಿ ಅನ್ನೋನ್ ಲೈಫ್ ಆಫ್ ಸ್ವಾಮಿ ವಿವೇಕಾನಂದ' ಪುಸ್ತಕದಲ್ಲಿ ವಿವೇಕಾನಂದರ ಬಗ್ಗೆ ಇಂತಹ ಅನೇಕ ರುಚಿಕಟ್ಟಾದ ಮಾಹಿತಿಗಳನ್ನು ನೀಡಿದ್ದಾರೆ.