ಕ್ರಿಕೆಟ್ ಗಿಂತ ಅಣ್ಣಾ ಹೋರಾಟ ದೊಡ್ಡದು : ಅಮೀರ್
ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೊಗೆಯಲೆಂದು ಜನ ಲೋಕಪಾಲ ಮಸೂದೆ ಮಂಡಿಸಬೇಕೆಂದು ಆಮರಣಾಂತ ಉಪವಾಸಕ್ಕೆ ಕುಳಿತಿರುವ 72 ವರ್ಷ ವಯಸ್ಸಿನ ವೃದ್ಧ ಅಣ್ಣಾ ಹಜಾರೆ ಅವರಿಗೆ ಬೆಂಬಲ ಸೂಚಿಸಿ ಬರೆದಿರುವ ಪತ್ರದಲ್ಲಿ, ಪ್ರತಿಯೊಬ್ಬರನ್ನೂ ಕಾಡುತ್ತಿರುವ ಭ್ರಷ್ಟಾಚಾರದ ವಿರುದ್ಧದ ಹೋರಾಟ ಈಗಿನ ಸಮಯದಲ್ಲಿ ಅತಿ ಮುಖ್ಯವಾದುದು ಎಂದು ಅಮೀರ್ ಬರೆದಿದ್ದಾರೆ.
ಪ್ರಧಾನಿ ಡಾ. ಮನಮೋಹನ ಸಿಂಗ್ ಅವರಿಗೆ ಕೂಡ ಬರೆದಿರುವ ಪತ್ರದಲ್ಲಿ, ಅಣ್ಣಾ ಹಜಾರೆ ಅವರ ಬೇಡಿಕೆಗಳಲ್ಲಿ ಸಾಕಷ್ಟು ಹುರುಳಿದೆ. ಇದರ ಬಗ್ಗೆ ನಾನೂ ಸಾಕಷ್ಟು ಓದಿದ್ದೇನೆ. ಈ ಜನ ಲೋಕಪಾಲ ಮಸೂದೆಯನ್ನು ಮಂಡಿಸುವ ಕುರಿತು ಕೇಂದ್ರ ಸರಕಾರ ಗಮನ ನೀಡಬೇಕು ಎಂದು ಅಮೀರ್ ಕೇಳಿಕೊಂಡಿದ್ದಾರೆ.
ಭ್ರಷ್ಟಾಚಾರದಿಂದ ಬಾಧನೆಗೊಳಗಾದ ಕೋಟಿಗಟ್ಟಲೆ ಜನರಲ್ಲಿ ನಾನು ಕೂಡ ಒಬ್ಬ. ಕಳೆದ ಕೆಲ ತಿಂಗಳುಗಳಿಂದ ಅನೇಕ ಭ್ರಷ್ಟ ಪ್ರಕರಣಗಳು ಹೊರಬಂದು ದೇಶವನ್ನು ದಂಗುಬಡಿಸಿವೆ. ಇದನ್ನು ಸರಿಪಡಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು. ಈ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಬೇಕಿರುವುದು ಪ್ರತಿ ನಾಗರಿಕನ ಕರ್ತವ್ಯ ಎಂದು ಅವರು ನುಡಿದಿದ್ದಾರೆ.
ಅಮೀರ್ ಖಾನ್ ಮಾತ್ರವಲ್ಲ ಬಾಲಿವುಡ್ ಉದ್ಯಮದ ಅನೇಕ ನಟ, ನಟಿ, ನಿರ್ದೇಶಕರು, ತಂತ್ರಜ್ಞರು ಅಣ್ಣಾ ಹಜಾರೆ ಅವರ ಹೋರಾಟಕ್ಕೆ ತಮ್ಮ ದನಿ ಸೇರಿಸಿದ್ದಾರೆ. ದಿನದಿಂದ ದಿನಕ್ಕೆ ಭ್ರಷ್ಟಾಚಾರದ ವಿರುದ್ಧದ ಹೋರಾಟ ವಿಪರೀತ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಕೇಂದ್ರ ಸರಕಾರ ಮಾತ್ರ ಜಾಣ ಕಿವುಡನಂತೆ ಕೂತಿದೆ.
ಧೋನಿ ಬೆಂಬಲ : ಬಾಲಿವುಡ್ ನಟ ಅಮೀರ್ ಖಾನ್ ಅವರ ಮಾತನ್ನು ಪುಷ್ಟೀಕರಿಸಿರುವ ವಿಶ್ವಕಪ್ ಗೆದ್ದಿರುವ ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು, ಕ್ರಿಕೆಟ್ಟಿಗಿಂತ ಹೆಚ್ಚಿನ ಬೆಂಬಲಕ್ಕೆ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಅಣ್ಣಾ ಹಜಾರೆ ಅವರು ಅರ್ಹರಾಗಿದ್ದಾರೆ. ದಯವಿಟ್ಟು ನಿಮ್ಮ ಬೆಂಬಲವನ್ನು ಅಣ್ಣಾ ಹಜಾರೆ ಅವರಿಗೆ ನೀಡಿರು ಎಂದು ಅಭಿಮಾನಿಗಳನ್ನು ಧೋನಿ ಕೋರಿದ್ದಾರೆ.