ಬಂಗಾರಪೇಟೆ: ಕಾಂಗ್ರೆಸ್ ಪ್ರಚಾರಕ್ಕೆ ಚಿರು
ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ಕೆ ಮುನಿಯಪ್ಪ ಅವರ ಆಹ್ವಾನದ ಮೇರೆಗೆ ಗುರುವಾರ ಚಿರಂಜೀವಿ ಅವರು ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಅವರ ಪರ ಮತಯಾಚಿಸಲಿದ್ದಾರೆ ಎಂದು ಪ್ರಜಾರಾಜ್ಯಂ ಪಾರ್ಟಿ ವಕ್ತಾರರು ಹೇಳಿದ್ದಾರೆ.
ಇತ್ತೀಚೆಗೆ ಚಿಕ್ಕಬಳ್ಳಾಪುರ ಮೂಲಕ ಅನಂತಪುರಕ್ಕೆ ಸಾಗಿದ್ದ ಚಿರಂಜೀವಿಗೆ ಅಭಿಮಾನಿಗಳು ಮುತ್ತಿಗೆ ಹಾಕಿ, ಜೈ ಕಾರ ಹಾಕಿದ್ದರು. ಕರ್ನಾಟಕದಲ್ಲೂ ಪ್ರಜಾರಾಜ್ಯಂ ಪಕ್ಷ ಅಧಿಕೃತ ಎಂಟ್ರಿ ಪಡೆಯಲಿದೆ ಎಂದು ಚಿರಂಜೀವಿ ಹೇಳಿದ್ದರು. ರಾಜ್ಯದ ಮೂರು ಕ್ಷೇತ್ರದಲ್ಲಿ ಪ್ರಜಾರಾಜ್ಯಂ ಸ್ಪರ್ಧೆ, ಸಿದ್ದರಾಮಯ್ಯ ಪ್ರಜಾರಾಜ್ಯಂ ಸೇರ್ಪಡೆ ಈ ರೀತಿ ಸುದ್ದಿ ಈ ಹಿಂದೆ ಹರಡಿತ್ತು.
ಗಡಿ ಭಾಗದ ಪ್ರದೇಶಗಳಲ್ಲಿ ತೆಲುಗು ಸ್ಟಾರ್ ಚಿರಂಜೀವಿ ಬಗ್ಗೆ ಜನರಿಗಿರುವ ಕ್ರೇಜ್ ನ ಲಾಭ ಪಡೆಯಲು ಕಾಂಗ್ರೆಸ್ ಉದ್ದೇಶಿಸಿದೆ. ಇತ್ತೀಚೆಗೆ ಕಾಂಗ್ರೆಸ್ ಪಕ್ಷದೊಡನೆ ಕೈ ಜೋಡಿಸಿರುವ ಪ್ರಜಾ ರಾಜ್ಯಂ ಪಕ್ಷದ ಅಧ್ಯಕ್ಷ ಕೆ ಚಿರಂಜೀವಿ, ಸ್ಟಾರ್ ಕ್ಯಾಂಪೇನರ್ ಆಗಿದ್ದಾರೆ.
ಸೋನಿಯಾ ಗಾಂಧಿ ಅವರ ಅಣತಿಯಂತೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಅಜಾದ್ ಅವರ ಯೋಜನೆಯಂತೆ ಸದ್ಯಕ್ಕೆ ತಮಿಳುನಾಡು ಅಸೆಂಬ್ಲಿ ಚುನಾವಣೆಗೆ ಚಿರಂಜೀವಿ ಸ್ಟಾರ್ ಪ್ರಚಾರಕರಾಗಿದ್ದಾರೆ. ಕಾಂಗ್ರೆಸ್ ಡಿಎಂಕೆ ಮೈತ್ರಿಯನ್ನು ಬೆಂಬಲಿಸುವಂತೆ ಓಟ್ ಕೇಳುತ್ತಿರುವ ಚಿರು, ನಾಳೆ ಬಂಗಾರಪೇಟೆ ಕಡೆ ಬಂದು ಕಾಂಗ್ರೆಸ್ ಗೆ ಓಟು ಕೊಡಿ ಎನ್ನಲಿದ್ದಾರೆ.