ಸಾಯಿಬಾಬಾ ಟ್ರಸ್ಟ್ ಆಂಧ್ರ ಸರಕಾರದ ಸುಪರ್ದಿಗೆ ?
ರಾಜ್ಯ ಪ್ರಧಾನ ಕಾರ್ಯದರ್ಶಿ (ಹಣಕಾಸು) ಎಲ್.ವಿ. ಸುಬ್ರಮಣ್ಯ, ಪ್ರಧಾನ ಕಾರ್ಯದರ್ಶಿ (ಆರೋಗ್ಯ) ಪಿ.ವಿ. ರಮೇಶ್, ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ. ರಘು ರಾಜು, ಉಸ್ಮಾನಿಯಾ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಲಕ್ಷ್ಮಣ ರಾವ್ ಮತ್ತು ಆಸ್ಪತ್ರೆಯ ಮತ್ತೊಬ್ಬ ತಜ್ಞ ವೈದ್ಯೆ ಡಾ. ಭಾನು ಪ್ರಸಾದ್ ಆಂಧ್ರ ಸರಕಾರ ನೇಮಿಸಿರುವ ವಿಶೇಷ ತಂಡದಲ್ಲಿದ್ದಾರೆ.
ತಂಡದಲ್ಲಿನ ವೈದ್ಯರು ಸಾಯಿಬಾಬಾ ಅವರ ಆರೋಗ್ಯದ ಮೇಲೆ ನಿಗಾವಹಿಸುತ್ತಾರೆ. ಉಳಿದ ಸದಸ್ಯರು ಟ್ರಸ್ಟ್ ನಡೆಸುತ್ತಿರುವ ಅನೇಕ ಸಮಾಜ ಸೇವಾ ಕೈಂಕರ್ಯ, ಯೋಜನೆಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗಲು ಸಮರ್ಪಕ ವ್ಯವಸ್ಥೆ ಇದೆಯೇ ಎಂಬುದನ್ನು ಅಧ್ಯಯನ ಮಾಡಲಿದ್ದಾರೆ. ಆದಾಯ ತೆರಿಗೆ ಇಲಾಖೆ ಮೂಲಗಳ ಪ್ರಕಾರ ಶ್ರೀ ಸತ್ಯ ಸಾಯಿ ಟ್ರಸ್ಟ್ ನ ಆಸ್ತಪಾಸ್ತಿ ಮೌಲ್ಯ 40,000 ಕೋಟಿ ರು. ಗಳಷ್ಟಿದೆ. ಟ್ರಸ್ಟ್ ಗೆ ಹರಿದುಬರುವ ಎಲ್ಲ ದೇಣಿಗೆಗಳಿಗೂ ತೆರಿಗೆ ವಿನಾಯಿತಿ ಇದೆ.
ಸದ್ಯಕ್ಕೆ ರಾಜ್ಯ ಸರಕಾರವನ್ನು ಕಾಡುತ್ತಿರುವ ಪ್ರಮುಖ ಅಂಶವೆಂದರೆ ಸಾವಿರಾರು ವಿದೇಶೀಯರು ಪ್ರತಿ ವರ್ಷ ನೂರಾರು ಕೋಟಿ ರುಪಾಯಿಗಳನ್ನು ಟ್ರಸ್ಟ್ ಗೆ ದಾನ ಮಾಡುತ್ತಿದ್ದಾರೆ. ಇದರ ಲೆಕ್ಕಾಚಾರವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಸಮರ್ಥ ವ್ಯವಸ್ಥೆ ಇದೆಯೇ ಎಂಬುದನ್ನು ತಂಡ ಪತ್ತೆ ಹಚ್ಚಬೇಕಾಗಿದೆ. ಇಲ್ಲವಾದಲ್ಲಿ ಟ್ರಸ್ಟ್ ಅನ್ನು ಸರಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಆಲೋಚನೆಯೂ ನಡೆಸಿದೆ.
ಪುಟ್ಟಪರ್ತಿಯಲ್ಲಿರುವ ಶ್ರೀ ಸತ್ಯ ಸಾಯಿ ಟ್ರಸ್ಟ್ ಎಂಬ ಬೃಹತ್ ಆಲದ ಮರದಡಿ ತಲಾ ಒಂದೊಂದು ವಿಶ್ವವಿದ್ಯಾಲಯ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಚೈತನ್ಯ ಜ್ಯೋತಿ ಎಂಬ ವಿಶ್ವ ಧಾರ್ಮಿಕ ವಸ್ತು ಸಂಗ್ರಹಾಲಯ, ಪ್ಲಾನಿಟೋರಿಯಂ, ರೈಲ್ವೆ ಸ್ಟೇಷನ್, ಸ್ಟೇಡಿಯಂ, ಒಳಾಂಗಣ ಕ್ರೀಡಾಂಗಣ, ಸಂಗೀತ ಕಾಲೇಜು, ಆಡಳಿತ ಭವನ ಮತ್ತು ವಿಮಾನ ನಿಲ್ದಾಣ ಇದೆ. ಇದಲ್ಲದೆ ಬೆಂಗಳೂರಿನ ಕಾಡುಗೋಡಿಯಲ್ಲಿ 'ಬೃಂದಾವನ' ಮತ್ತು ಬೃಹತ್ ಆಸ್ಪತ್ರೆ ಇದೆ. ಜತೆಗೆ 180 ರಾಷ್ಟ್ರಗಳಲ್ಲಿರುವ 1,200 ಸತ್ಯ ಸಾಯಿಬಾಬಾ ಕೇಂದ್ರಗಳು ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಿವೆ.