ಸಂಖ್ಯಾಶಾಸ್ತ್ರದ ಹಿಂದೆ ಬಿದ್ದ ಟೀಂ ಇಂಡಿಯಾ?
ಅಹಮದಾಬಾದ್, ಮಾ.22: ಈ ಬಾರಿ ವಿಶ್ವಕಪ್ ಗೆಲ್ಲಲೇ ಬೇಕು ಎಂದು ಪಣ ತೊಟ್ಟಿರುವ ಟೀಂ ಇಂಡಿಯಾಗೆ ಇನ್ನುಳಿದಿರುವುದು ಮೂರು ಹೆಜ್ಜೆ ಮಾತ್ರ. ಇಲ್ಲಿನ ಮೋಟೆರಾ ಕ್ರೀಡಾಂಗಣದಲ್ಲಿ ಗುರುವಾರ ಬಲಾಢ್ಯ ಆಸ್ಟ್ರೇಲಿಯಾವನ್ನು ಮಣಿಸಲು ಎಲ್ಲ ರೀತಿಯಿಂದಲೂ ಧೋನಿ ಪಡೆ ಸಜ್ಜಾಗುತ್ತಿದೆ. ಟೀಂ ಇಂಡಿಯಾದ ಪ್ರಮುಖ ಆಟಗಾರರು ಜ್ಯೋತಿಷಿಗಳು, ಸಂಖ್ಯಾ ಶಾಸ್ತ್ರಜ್ಞರ ಬೆನ್ನು ಬಿದ್ದಿರುವ ಸುದ್ದಿ ಕೂಡಾ ಹೊರಬಿದ್ದಿದೆ. ಎಲ್ಲದರ ಅದೃಷ್ಟ ಪರೀಕ್ಷೆಗೆ ಕ್ರೀಡಾಂಗಣ ಸಜ್ಜಾಗಿದೆ.
ವಿಶ್ವಕಪ್ 2011 ಟೂರ್ನಿ ಆರಂಭದಲ್ಲೇ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಬ್ಯಾಟ್ಸ್ಮನ್ ವಿರೇಂದರ್ ಸೆಹ್ವಾಗ್ರ ಜೆರ್ಸಿ ಸಂಖ್ಯೆ 44 ಶುಭ ಸೂಚಕವಾಗಿತ್ತಂತೆ. ಎದುರಾಳಿ ತಂಡದ ಬೌಲರ್ ಗಳಿಗೆ ಮೈ ಚಳಿ ಬಿಡಿಸುತ್ತಿದ್ದ ಸೆಹ್ವಾಗ್ ಬ್ಯಾಟಿಂಗ್ ಯಶಸ್ಸಿಗೆ ಈ ಸಂಖ್ಯೆ ಕಾರಣವಂತೆ. ಆದರೆ, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಂಖ್ಯಾರಹಿತ ಶರ್ಟ್ ಧರಿಸಲು ಸೆಹ್ವಾಗ್ ನಿರ್ಧರಿಸಿದ್ದಾರೆ.
ಸಂಖ್ಯಾಶಾಸ್ತ್ರವನ್ನು ಅಪಾರವಾಗಿ ನಂಬುವ ಸೆಹ್ವಾಗ್ಗೆ ಅವರ ಆಪ್ತ ಸಂಖ್ಯಾಶಾಸ್ತ್ರಜ್ಞರೊಬ್ಬರು ಸಂಖ್ಯೆ ಇರದ ಶರ್ಟ್ ಅನ್ನು ಧರಿಸಿ ಆಡುವಂತೆ ಸೂಚಿಸಿದ್ದಾರಂತೆ. ತಕ್ಷಣವೇ ಜಾರಿಗೆ ತರಲು ಸೆಹ್ವಾಗ್ ಒಪ್ಪಿಕೊಂಡಿದ್ದಾರೆ. ಗಾಯಗೊಂಡಿದ್ದ ಸೆಹ್ವಗ್ ಅಹಮದಾಬಾದ್ ಪಂದ್ಯದಲ್ಲಿ ಆಡುವುದು ಖಚಿತವಾಗಿದೆ. ವಿಶ್ವಕಪ್ 2011 ನಲ್ಲಿ 5 ಪಂದ್ಯಗಳಿಂದ 65.40 ರನ್ ಸರಾಸರಿಯಲ್ಲಿ 327 ರನ್ ಗಳಿಸಿರುವ ಸೆಹ್ವಾಗ್ ಯಾವ ರೀತಿ ಆಡುತ್ತಾರೆ ನೋಡಬೇಕು.
ಸಂಖ್ಯೆಗಳ ಅಧೀನದಲ್ಲಿ ನಾಯಕ : ಟೀಂ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಜನ್ಮ ದಿನಾಂಕ ಜುಲೈ 7 ಹಾಗಾಗಿ ಅವರ ಜೆರ್ಸಿ ಸಂಖ್ಯೆ ಕೂಡಾ 7, ಅದೇ ರೀತಿ ಮತ್ತೊಬ್ಬ ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ರ ಜನ್ಮ ದಿನಾಂಕ ಡಿಸೆಂಬರ್ 12 ಆಗಿರುವುದರಿಂದ ಅವರ ಶರ್ಟ್ನ ಸಂಖ್ಯೆ ಕೂಡಾ 12.
ವಿಶ್ವಕಪ್ : ಮುಖಪುಟ | ಚಿತ್ರಪಟ | ಅಂಕಗಳ ಕೋಷ್ಟಕ | ಟಾಪ್ ಬ್ಯಾಟ್ಸ್ ಮನ್| ಟಾಪ್ ಬೌಲರ್
ಅಲ್ಲದೆ ತನ್ನ ತಾಯಿಯ ಸಲಹೆ ಮೇರೆಗೆ ಯುವರಾಜ್ ದೈತ್ಯ ಶಕ್ತಿಗಳ ನಿಗ್ರಹಕ್ಕಾಗಿ ತಮ್ಮ ಬಲಗೈ ಮಣಿಕಟ್ಟಿಗೆ ಕಪ್ಪು ದಾರವನ್ನು ಕಟ್ಟಿ ಕೊಂಡಿದ್ದಾರೆ. ಹಾಗೆಯೇ ವಿರಾಟ್ ಕೊಹ್ಲಿ ಕೂಡಾ ಜ್ಯೋತಿಷಿಗಳ ಸಲಹೆಯಂತೆ ಕಪ್ಪುದಾರವನ್ನು ಕಟ್ಟಿಕೊಂಡಿದ್ದಾರೆ. ತಮ್ಮ ನಂಬಿಕೆಯನ್ನು ಸಮರ್ಥಿಸಿಕೊಳ್ಳುವ ಕೊಹ್ಲಿ, ಹೆಚ್ಚು ರನ್ ಗಳಿಸಿದ್ದಾಗ ಧರಿಸಿದ್ದ ಗ್ಲೌವ್ಸ್ ಅನ್ನು ಮತ್ತೆ ಮತ್ತೆ ಬಳಕೆ ಮಾಡುತ್ತಿದೆ ಎಂದಿದ್ದಾರೆ.
ಇನ್ನು ಆರಂಭಿಕ ಬೌಲರ್ ಜಹೀರ್ ಖಾನ್ ಹಳದಿ ಬಣ್ಣದ ಕರ್ಚೀಫ್ ಅದೃಷ್ಟ ತರುತ್ತದೆ ಎಂಬ ನಂಬಿಕೆ ಹೊಂದಿದ್ದಾರೆ. ಇದೇ ರೀತಿ ಮೊಹಿಂದರ್ ಅಮರ್ ನಾಥ್ ಹಾಗೂ ಸ್ಟೀವ್ ವಾ ಕೂಡಾ ತಮ್ಮ ಕಿಸೆಯಲ್ಲಿ ಕೆಂಪು ಕರ್ಚೀಫ್ ಸದಾ ಇಟ್ಟುಕೊಂಡಿರುತ್ತಿದ್ದರು.
ಕ್ರಿಕೆಟ್ ದೇವರ ನಂಬಿಕೆಗಳು: ಕ್ರಿಕೆಟ್ ದಂತ ಕಥೆ ಎನಿಸಿಕೊಂಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ಗೆ ಬರುವಾಗ ಎಡಗಾಲಿನ ಪ್ಯಾಡ್ ಮೊದಲು ಕಟ್ಟುತ್ತಾರೆ. ನಂತರ ತಮ್ಮ ಇಷ್ಟದ ಬ್ಯಾಟನ್ನು ಆಯ್ಕೆ ಮಾಡಿಕೊಂಡು ಕಣಕ್ಕಿಳಿಯುತ್ತಾರೆ. ಹಾಗೆಯೇ ಸಚಿನ್ ಬ್ಯಾಟ್ ಮಾಡುವಾಗ ಅವರ ಕುಟುಂಬದ ಯಾರು ಟಿವಿ ನೋಡುವುದಿಲ್ಲ, ಕಾರಣ ಟಿವಿ ನೋಡಿದರೆ ಅವರು ಬೇಗನೆ ಔಟ್ ಆಗುತ್ತಾರೆ ಎಂಬ ಭಯವಂತೆ.
ಇನ್ನು ಹಲವು ಕ್ರಿಕೆಟ್ಟಿಗರ ಕುಟುಂಬಗಳಲ್ಲೂ ಕೆಲವು ಅಭ್ಯಾಸಗಳು ರೂಢಿಯಲ್ಲಿವೆ. ಭಾರತ ಚೆನ್ನಾಗಿ ಆಡುತ್ತಿದ್ದಾಗ, ಕುಳಿತ ಸ್ಥಳದಲ್ಲೇ ಕುಳಿತಿರುವುದು. ಕೆಲ ತಿಂಡಿ ತೀರ್ಥಗಳನ್ನು ಮಾತ್ರ ಸೇವಿಸುವುದು. ಪಂದ್ಯಕ್ಕೆ ಮುಂಚೆ ಹಾಲು ಕುಡಿದು ದೇವರನ್ನು ಪ್ರಾರ್ಥಿಸುವುದು ಇತ್ಯಾದಿ. ನಂಬಿಕೆಗಳು ಇರಬೇಕು ಆದರೆ, ಅದೇ ಅಭ್ಯಾಸವಾಗಿ ಮೂಢನಂಬಿಕೆಯಾದರೆ ಕಷ್ಟ. ಟೀಂ ಇಂಡಿಯಾದಲ್ಲಿ ಅಷ್ಟೆಲ್ಲಾ ಪ್ರತಿಭೆ ಇದ್ದರೂ ಈ ನಂಬಿಕೆಗಳು ಏಕೆ ಎಂದು ಪ್ರಶ್ನಿಸಿದರೆ ಸಿಗುವ ಉತ್ತರ ಅಭ್ಯಾಸ ಬಲ.












Click it and Unblock the Notifications