ಇಂಡಿಯಾ, ಇಂಗ್ಲೆಂಡ್ ಕದನಕ್ಕೆ ಮಳೆರಾಯ ಅಂಪೈರ್
ಬೆಂಗಳೂರು, ಫೆ.26 : ಕ್ರಿಕೆಟ್ ಅಭಿಮಾನಿಗಳು ಕೆಎಸ್ ಸಿಎ ಜೊತೆ ಗುದ್ದಾಟ ನಡೆಸಿ ಹಾಗೋ ಹೀಗೋ ಟೆಕೆಟ್ ಪಡೆದರೂ ವಿಶ್ವಕಪ್ 2011ರ ಮಹತ್ವದ ಪಂದ್ಯ ನೋಡುವ ಅವಕಾಶದಿಂದ ವಂಚಿತರಾಗುವ ಸಾಧ್ಯತೆಯಿದೆ. ಭಾನುವಾರದ ಭಾರತ-ಇಂಗ್ಲೆಂಡ್ ಹಣಾಹಣಿಗೆ ಎಲ್ಲವೂ ಸಿದ್ಧ ಎನ್ನುವ ಹೊತ್ತಿಗೆ ಅಕಾಲಿಕ ಮಳೆ ಪಂದ್ಯವನ್ನು ನುಂಗುವ ಬೆದರಿಕೆ ಒಡ್ಡಿದೆ.
ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಬಿ ಪುಟ್ಟಣ್ಣ ಅವರು ನೀಡುರ್ವ ಮುನ್ಸೂಚನೆ ಪ್ರಕಾರ ಶನಿವಾರ ಮತ್ತು ರವಿವಾರ ಬೆಂಗಳೂರಿನಲ್ಲಿ ಭಾರೀ ಗುಡುಗು ಸಹಿತ ಮಳೆಯ ನಿರೀಕ್ಷೆ ಇದೆ. ಶುಕ್ರವಾರ ಸಂಜೆಯೂ ಭಾರೀ ಮಳೆಯಲ್ಲಿ ನಗರ ಸ್ನಾನ ಮಾಡಿದೆ. ಭಾರತ ಹಾಗೂ ಇಂಗ್ಲೆಂಡ್ ಆಟಗಾರರ ತಾಲೀಮಿಗೂ ಮಳೆ ಅಡ್ಡಿ ಪಡಿಸಿದೆ. ಮಳೆ ಮುಂದುವರಿದರೆ ಕ್ರಿಕೆಟ್ ಅಭಿಮಾನಿಗಳು ನಿರಾಸೆ ಅನುಭವಿಸುವುದು ಖಂಡಿತ. ಮಳೆರಾಯರನ್ನು ಶಪಿಸುತ್ತಾ, ಸೂರ್ಯದೇವನನ್ನು ಸ್ತುತಿಸುತ್ತಾ ಅಭಿಮಾನಿಗಳು ದೊಮ್ಮಲೂರಿನ ಸೂರ್ಯನಾರಾಯಣ ದೇಗುಲದಲ್ಲಿ ವಿಶೇಷ ಪೂಜೆ ನಡೆಸಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(KSCA)ಯಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಅನಿಲ್ ಕುಂಬ್ಳೆ ನೇತೃತ್ವದ ಆಡಳಿತ ಮಂಡಳಿಗೆ ಒಂದಿಲ್ಲೊಂದು ಎಡವಟ್ಟುಗಳು ಎದುರಾಗುತ್ತಿವೆ. ಪ್ರಾರಂಭದಲ್ಲಿ ವಿಶ್ವಕಪ್ ಪಂದ್ಯಗಳಿಗೆ ಕ್ರೀಡಾಂಗಣಕ್ಕೆ ಭದ್ರತೆ ಒದಗಿಸುವ ವಿಚಾರ ಕುರಿತಂತೆ ಪೊಲೀಸರನ್ನು ಎದುರು ಹಾಕಿಕೊಂಡರು. ಗುರುವಾರ ಟಿಕೆಟ್ ಮಾರಾಟ ಸಂದರ್ಭದಲ್ಲಿ ಲಭ್ಯವಿದ್ದ ಆರೇಳು ಸಾವಿರ ಟಿಕೆಟ್ಗೆ 20 ರಿಂದ 25 ಸಾವಿರ ಜನ ಮುಗಿಬಿದ್ದ ಪರಿಣಾಮ ದೊಡ್ಡ ದೊಂಬಿಯೇ ನಡೆದು ಪೊಲೀಸರು ಲಾಠಿ ಬೀಸಿದರು. ಅನೇಕರು ಗಾಯಾಳುಗಳಾದರೆ, ಇಬ್ಬರು ಗಂಭೀರವಾಗಿ ಗಾಯಗೊಂಡರು. ಈ ಟಿಕೆಟ್ ಗಲಾಟೆ ವಿದೇಶಿ ಮಾಧ್ಯಮಗಳಲ್ಲೂ ದೊಡ್ಡ ಸುದ್ದಿಯಾಯಿತು. ಈಗ ಇದ್ದಕ್ಕಿದ್ದಂತೆ ಆಕಾಶ ಬಿರಿದು ಮಳೆ ಸುರಿಸುವ ಮೂಲಕ ಕ್ರಿಕೆಟ್ ಹಬ್ಬಕ್ಕೆ ತಣ್ಣೀರು ಸುರಿಯುವ ಹುನ್ನಾರ ನಡೆಸಿದೆ.
ಕೆಎಸ್ಸಿಎಗೆ ಭೀತಿ ಇಲ್ಲ: ಆದರೆ ಕೆಎಸ್ಸಿಎ ಎಂಥಾ ಮಳೆಗೂ ತಾನು ಸಿದ್ಧವಾಗಿರುವುದಾಗಿ ಹೇಳಿಕೊಂಡಿದೆ. ದೇಶದಲ್ಲೇ ಅತ್ಯಂತ ವೃತ್ತಿಪರ ಕ್ರಿಕೆಟ್ ಸಂಸ್ಥೆ ಎಂದು ಹೆಸರಾಗಿರುವ ಕೆಎಸ್ಸಿಎ ಅಂಗಣದಲ್ಲಿ ಒಳಚರಂಡಿ ವ್ಯವಸ್ಥೆ ಅತ್ಯುತ್ತಮವಾಗಿದೆ. ಎರಡು ಸೂಪರ್ ಸಾಪರ್ ಯಂತ್ರಗಳಿದ್ದು, ಇಡೀ ಮೈದಾನಕ್ಕೆ ಹೊದಿಸುವಷ್ಟು ಉತ್ತಮ ಹೊದಿಕೆ ಲಭ್ಯವಿದೆ. ಮಳೆ ನಿಂತರೆ, ಕೂಡಲೇ ಪಂದ್ಯವನ್ನು ಆಟಕ್ಕೆ ಸಜ್ಜುಗೊಳಿಸುವುದಕ್ಕೆ ನಾವು ಸಿದ್ಧರಾಗಿದ್ದೇವೆ ಎಂದು ಕೆಎಸ್ಸಿಎ ವಕ್ತಾರ ಮಾಜಿ ಆಟಗಾರ ಸುಜಿತ್ ಸೋಮಸುಂದರ್ ಹೇಳಿದ್ದಾರೆ.
ರನ್ ಮಳೆ: ಮಳೆಯನ್ನು ತಡೆಯುವುದು ಸಾಧ್ಯವಿಲ್ಲ. ಆದರೆ ಪಿಚ್ಗೆ ಹಾನಿಯಾಗದಂತೆ, ಆಟಕ್ಕೆ ತೊಂದರೆಯಾಗದಂತೆ ತ್ವರಿತವಾಗಿ ಸಜ್ಜುಗೊಳಿಸುವ ದಕ್ಷ ವ್ಯವಸ್ಥೆ ನಮ್ಮಲ್ಲಿದೆ ಎಂದು ಸುಜಿತ್ ಹೇಳಿದರು. ಈ ನಡುವೆ ರನ್ ಹೊಳೆ ಹರಿಯುವಂತೆ ಪಿಚ್ ಸಿದ್ಧಪಡಿಸಲಾಗಿದೆ ಎಂದು ಕ್ಯೂರೆಟರ್ ನಾರಾಯಣ ರಾಜು ಹೇಳಿದ್ದಾರೆ. ಆದರೆ, ಬೆಂಗಳೂರಿನ ಪಿಚ್ ಸ್ಪರ್ಧಾತ್ಮಕವಾಗಿದ್ದು, ಮಳೆ ಬಿದ್ದರೆ ಯಾವ ರೀತಿ ಬದಲಾವಣೆಯಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಮಳೆಯಿಂದ ಇಂಗ್ಲೆಂಡ್ ವೇಗಿಗಳಿಗೆ ಅನುಕೂಲವಾಗುವ ಸಾಧ್ಯತೆಯೂ ಇದೆ ಎಂದು ರಾಜು ಹೇಳಿದರು.












Click it and Unblock the Notifications