ಸಿಬಿಐ ನೋಟೀಸಿಗೆ ಬಳ್ಳಾರಿ ಗಣಿಧಣಿಗಳು ತಲ್ಲಣ
ನೋಟೀಸ್ ಪಡೆದಿರುವ ಉದ್ದೇಶಿತ 65 ಗಣಿ ಕಂಪನಿಗಳು 1998ರಿಂದ ಈವರೆಗೆ ರಪ್ತು ಮಾಡಿರುವ ಅದಿರಿನ ಸಮಗ್ರ ವಿವರಗಳನ್ನು, ಗಣಿ ಗುತ್ತಿಗೆ, ಗಣಿ ಯೋಜನೆಯ ವಿವರ, ಅದಿರು ರವಾನೆ ಸೇರಿ ಕಂಪನಿಗಳ ಮಾಸಿಕ ಹಾಗೂ ವಾರ್ಷಿಕ ರಿಟರ್ನ್ ಗಳನ್ನು ಸಲ್ಲಿಸಬೇಕು.
ಗಣಿ ಗುತ್ತಿಗೆಯನ್ನು ಪಡೆಯುವಾಗ ಕೇಂದ್ರ - ರಾಜ್ಯ ಸರ್ಕಾರದಿಂದ ಆಗಿರುವ ಒಪ್ಪಂದಗಳ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ಸ್, ಆಯಾ ಗಣಿ ಕಂಪನಿಗಳ ನಿರ್ದೇಶಕರ ವಿವರ, ಅವರ ಬ್ಯಾಲನ್ಸ್ ಶೀಟ್, ಕಂಪನಿಗಳ ವ್ಯವಹಾರಗಳ ಸಂಪೂರ್ಣ ಆಯ - ವ್ಯಯ ಪತ್ರವನ್ನು 1998ರಿಂದ ಈವರೆಗೂ ಸಲ್ಲಿಸಬೇಕು ಎಂದು ನೋಟೀಸ್ನಲ್ಲಿ ಸ್ಪಷ್ಟಪಡಿಸಲಾಗಿದೆ.
ಭೇಟಿ, ಮಾಹಿತಿ ಕೋರಿಕೆ : ಕರ್ನಾಟಕ - ಆಂಧ್ರದ ಗಡಿಯ ಆಂಧ್ರದ ಓಬಳಾಪುರಂ ಗ್ರಾಮ ವ್ಯಾಪ್ತಿಯ ಆರು ಗಣಿಗಳ ಚಟುವಟಿಕೆಗಳ ಕುರಿತು 2 ದಿನಗಳ ಕಾಲ ಗ್ರೇಡ್ ಪರಿಶೀಲನೆ ನಡೆಸಿದ ಸಿಬಿಐ ಅಧಿಕಾರಿಗಳ ತಂಡದ ಐವರು, ಹೊಸಪೇಟೆಯಲ್ಲಿ ಇರುವ ಗಣಿ ಮತ್ತು ಭೂ ವಿಜ್ಞಾನ ಕಚೇರಿಗೆ ಭೇಟಿ ನೀಡಿದ್ದಾರೆ. ಅಲ್ಲದೇ, ಹೊಸಪೇಟೆ - ಸಂಡೂರು ವ್ಯಾಪ್ತಿಯ ಎಲ್ಲಾ ಗಣಿಗಳ ಸಮಗ್ರ ಮಾಹಿತಿಯನ್ನು ಶೀಘ್ರದಲ್ಲೇ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ತಲ್ಲಣಗೊಂಡ ಗಣಿ ಉದ್ಯಮ : ಬಳ್ಳಾರಿ, ಹೊಸಪೇಟೆ ಮತ್ತು ಸಂಡೂರು ವ್ಯಾಪ್ತಿಯಲ್ಲಿಯ ಗಣಿ ಉದ್ಯಮ ಸಂಪೂರ್ಣ ತಲ್ಲಣಗೊಂಡಿದೆ. ಅಲ್ಲದೇ, ಸಿಬಿಐ ಜಿಲ್ಲೆಯ 65 ಕಂಪನಿಗಳಿಗೆ ನೋಟೀಸ್ ಜಾರಿ ಮಾಡಿ ಒಟ್ಟಾರೆ ಚಟುವಟಿಕೆಗಳ ಸಮಗ್ರ ಮಾಹಿತಿಯನ್ನು ಕೋರಿರುವ ಹಿನ್ನಲೆಯಲ್ಲಿ ಅನೇಕರು ಬೆಚ್ಚಿಬಿದ್ದಿದ್ದಾರೆ. ಇಡೀ ಉದ್ಯಮ ಏಕಾಏಕಿ ಆತಂಕಕ್ಕೆ ಒಳಗಾಗಿದೆ.