ಮಾಫಿಯಾ ಕರಾಮತ್ತು: ಅಡುಗೆ ಅನಿಲ ಹೋಟೆಲ್ಗೆ ಆಹಾರ
ಇಡೀ ರಾಜ್ಯದಲ್ಲಿ ಕೇವಲ 1.2 ಕೋಟಿ ಕುಟುಂಬಗಳು ಇವೆಯಾದರೂ ಅಡುಗೆ ಅನಿಲ ಸಂಪರ್ಕ ಸಾಧಿಸುವ ಸಲುವಾಗಿ 1.6 ಕೋಟಿಗೂ ಅಧಿಕ ಸಂಖ್ಯೆಯ ಕಾರ್ಡುಗಳನ್ನು ಬಳಸಲಾಗುತ್ತಿದೆ. ಹಾಗಾದರೆ ಈ 40 ಲಕ್ಷ ಹೆಚ್ಚುವರಿ ಸಿಲಿಂಡರ್ಗಳಲ್ಲಿನ ಅನಿಲ ಎಲ್ಲಿ ಆವಿಯಾಗುತ್ತಿದೆ? ಎಂಬ ಭಯಾನಕ ಪ್ರಶ್ನೆಗೆ ಸರಕಾರದ ಬಳಿ ಸ್ಪಷ್ಟ ಉತ್ತರವಿಲ್ಲ. ಇನ್ನೂ ಆತಂಕದ ವಿಷಯವೆಂದರೆ ೩೦ ಲಕ್ಷ ಜನ ಈ ಸಬ್ಸಿಡಿ ಅನಿಲ ಸಂಪರ್ಕವನ್ನು ಬಳಸುತ್ತಿಲ್ಲ. ಹೀಗಾಗಿ ಸುಮಾರು 70 ಲಕ್ಷ ಅನಿಲ ಸಂಪರ್ಕಗಳನ್ನು ಯಾವ ಅಗ್ನಿಕುಂಡಕ್ಕೆ ಬಳಕೆಯಾಗುತ್ತಿದೆಯೋ?!
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಎ. ಹರೀಶ್ಗೌಡ ಅವರಂತೂ ಇದಕ್ಕೆಲ್ಲ ಉತ್ತರ ಕಂಡುಕೊಳ್ಳಲು ಯಾವುದೇ ಪೂರ್ವ ತಯಾರಿಯಿಲ್ಲದೆ ನಕಲಿ ಅನಿಲ ಸಂಪರ್ಕ ಪತ್ತೆದಾರಿಕೆಗೆ ಇತ್ತೀಚೆಗೆ ಮುಂದಾದರು. ಇದರಿಂದ ಸಾಮಾನ್ಯ ಬಳಕೆದಾರರು ಪರದಾಡಬೇಕಾಯಿತೇ ಹೊರತು ಅವರ ಉದ್ದೇಶ ಈಡೇರದೇ ಹೋಯಿತು.
ಈ ನಿಟ್ಟಿನಲ್ಲಿ ಇಲಾಖೆಯು ಮಾಜಿ ಸಚಿವ ಬಿ. ಸೋಮಶೇಖರ್ ಅವರ ನೆರವು ಪಡೆಯಬಹುದು ಎನಿಸುತ್ತದೆ. ಮಂಡ್ಯದಲ್ಲಿ ೧೯೮೧ರಿಂದ ಅನಿಲ ವಿತರಣೆ ಏಜೆನ್ಸಿ ಹೊಂದಿರುವ ಮಾಜಿ ಸಚಿವರಿಗೆ ಅನಿಲ ಸಂಪರ್ಕ ಹೇಗೆಲ್ಲ ದುರ್ಬಳಕೆಯಾಗುತ್ತದೆ ಎಂಬುದು ಚೆನ್ನಾಗಿ ಗೊತ್ತಂತೆ.
ವಾಣಿಜ್ಯ ಮತ್ತು ಗೃಹ ಬಳಕೆ ಅನಿಲದ ದರ ವ್ಯತ್ಯಾಸ ಭಾರಿಯಾಗಿದೆ. ಇದರ ಲಾಭ ಪಡೆಯಲು ಸಮಾಜಘಾತುಕ ಶಕ್ತಿಗಳು ತಮ್ಮದೇ ಆದ ಜಾಲವನ್ನು ಹೊಂದಿವೆ. ಇಲಾಖೆಯಿಂದ ನಕಲಿ ಕಾರ್ಡುಗಳನ್ನು ಪಡೆದು ಅದರಿಂದ ಸುಲಭವಾಗಿ ಗೃಹ ಬಳಕೆ ಅನಿಲ ಸಂಪರ್ಕ ಪಡೆಯುತ್ತಾರೆ. ಅವುಗಳನ್ನೇ ವಾಣಿಜ್ಯ ಬಳಕೆಗೆ ಅಂದರೆ ವಾಹನಗಳು ಮತ್ತು ಹೋಟೆಲ್ಗಳಿಗೆ ವಿತರಿಸುತ್ತಾರೆ. ಈ ರೀತಿ ಒಂದು ಸಿಲಿಂಡರ್ ಮಾರಾಟದಿಂದ ಕನಿಷ್ಠ ೪೦೦ ರೂ. ಲಾಭ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ ಸೋಮಶೇಖರ್. ಈ ಬಹಿರಂಗ ಸತ್ಯವನ್ನು ಗಮನಿಸಿ, ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳುತ್ತದೆಯೇ?