ಶೋಭಾ ಅತ್ತರೆ ಸಿಎಂ ಅಳ್ತಾರೆ ಏಕೆ : ಸಿದ್ದು
ಬೆಂಗಳೂರು, ಜ. 31 : ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆದಾಗ ಯಡಿಯೂರಪ್ಪ ಅತ್ತಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಪ್ರವಾಹ ಬಂದಾಗಲೂ ಸಿಎಂ ಅತ್ತಿಲ್ಲ. ಮುಖ್ಯಮಂತ್ರಿಗಳು ಅತ್ತಿದ್ದು ಶೋಭಾ ಕರಂದ್ಲಾಜೆ ಸಚಿವ ಸ್ಥಾನದಿಂದ ಕೆಳಗಿಳಿದಾಗ ಮಾತ್ರ. ಹೋದಲ್ಲಿ ಬಂದಲ್ಲಿ ಮಾಧ್ಯಮಗಳ ಮುಂದೆ ಸಿಎಂ ಅತ್ತಿದ್ದೋ ಅತ್ತಿದ್ದು. ಶೋಭಾ ಈಗ ಮತ್ತೆ ಸಚಿವ ಸ್ಥಾನದಲ್ಲಿದ್ದಾರೆ, ನೋಡಿ ನಮ್ಮ ಮುಖ್ಯಮಂತ್ರಿಗಳು ಈಗ ಎಷ್ಟು ಲವಲವಿಕೆಯಿಂದ ಇದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಯಡಿಯೂರಪ್ಪ ಅವರನ್ನು ಲೇವಡಿ ಮಾಡಿದ್ದಾರೆ.
ನಗರದ ಜಕ್ಕರಾಯನಕೆರೆ ಮೈದಾನದಲ್ಲಿ ಭಾನುವಾರ (ಜ.30) ನಡೆದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ದೇಶ ಕಂಡ ಮಹಾನ್ ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ. ಅಭಿವೃದ್ದಿಯೇ ಸರಕಾರದ ಮೂಲ ಮಂತ್ರ ಎಂದು ತನ್ನ ಕುಟುಂಬದ ಅಭಿವೃದ್ದಿ ಮಾಡುತ್ತಿದ್ದಾರೆ. ಎಷ್ಟೇ ಹಗರಣದಲ್ಲಿ ಸಿಲುಕಿದರೂ ಮುಖ್ಯಮಂತ್ರಿಗಳು ರಾಜೀನಾಮೆ ನೀಡುವುದಿಲ್ಲ. ಶೋಭಾ ಕರಂದ್ಲಾಜೆಯಾದರೂ ಸ್ವಲ್ಪ ಮುಖ್ಯಮಂತ್ರಿಗಳಿಗೆ ಬುದ್ದಿ ಹೇಳಬಾರದೇ, ಅವರು ಹೇಳಿದರೆ ಬಹುಶಃ ಕೇಳಿದರೂ ಕೇಳಬಹುದು ಎಂದು ತನ್ನ ಎಂದಿನ ವ್ಯಂಗ್ಯ ಮಿಶ್ರಿತ ಮಾತಿನಲ್ಲಿ ಯಡಿಯೂರಪ್ಪ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈಶ್ವರಪ್ಪ ಒಬ್ಬ ಬ್ರೈನ್ ಲೆಸ್ ಫೆಲೋ. ಆತನಿಗೆ ಮೆದುಳು ಅನ್ನೋದೇ ಇಲ್ಲ. ದಿನಕ್ಕೊಂದು ಹೇಳಿಕೆ. ಒಬ್ಬ ರಾಜ್ಯಾಧ್ಯಕ್ಷನಾಗಿ ಪಕ್ಷದ ಹಿರಿಯ ಶಾಸಕನಾಗಿ ಯಾವ ರೀತಿ ಹೇಳಿಕೆ ನೀಡಬೇಕೆನ್ನುವ ಕಾಮನ್ ಸೆನ್ಸ್ ಕೂಡಾ ಇಲ್ಲ. ರಾಜ್ಯಪಾಲರ ಬಗ್ಗೆ ಕಟುವಾಗಿ ಮಾತನಾಡುವ ಈಶ್ವರಪ್ಪನಿಗೆ ದೇವರೇ ಬುದ್ದಿ ಕೊಡಬೇಕು. ಯಡಿಯೂರಪ್ಪ ಪದತ್ಯಾಗ ಮಾಡುವವರೆಗೆ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.(ಸಿದ್ದರಾಮಯ್ಯ)












Click it and Unblock the Notifications