ಚಿರಂಜೀವಿ ವಚ್ಚಾಡು...ಅಭಿಮಾನಿಗಳಿಗೆ ಲಾಠಿ ಏಟು
ಆಂಧ್ರದಲ್ಲಿ ಬೆಳೆಯುತ್ತಿರುವ ತನ್ನ ರಾಜಕೀಯ ವರ್ಚಸ್ಸು ಗಡಿ ದಾಟಿ ಕರ್ನಾಟಕಕ್ಕೂ ಕಾಲಿರಿಸುವಂತೆ ಮಾಡಲು ಚಿರಂಜೀವಿ ಯೋಜನೆ ಹಾಕಿಕೊಂಡಿದ್ದಾರೆ. ಆದರೆ, ಆಂಧ್ರದಲ್ಲಿದ್ದಂತೆ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳ ಬೇಳೆ ಬೇಯುವುದಿಲ್ಲ. ಆದರೂ, ಪ್ರಜಾರಾಜ್ಯಂ ಪಕ್ಷದ ಕರ್ನಾಟಕ ವಿಭಾಗವನ್ನು ಅಧಿಕೃತವಾಗಿ ಆರಂಭಿಸಲು ಚಿರಂಜೀವಿ ಸಿದ್ಧತೆ ನಡೆಸಿದ್ದಾರೆ.
ಒದೆ ತಿಂದ ಅಭಿಮಾನಿಗಳು: ಹೈದರಾಬಾದಿನಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಚಿರಂಜೀವಿ, ನಂತರ ರಸ್ತೆ ಮಾರ್ಗವಾಗಿ ಅನಂತಪುರಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದ ಚದಲಪುರ ಬಳಿ ಮೆಗಾ ಸ್ಟಾರ್ ರನ್ನು ಕಂಡ ಅಭಿಮಾನಿಗಳು ಹುಚ್ಚೆದ್ದು ಕುಣಿಯತೊಡಗಿದರು.
ಏಕಾಏಕಿ ನೂರಾರು ಜನ ಚಿರಂಜೀವಿ ಕಾರಿನೆಡೆಗೆ ಮುತ್ತತೊಡಗಿದರು. ಈ ಬಗ್ಗೆ ಅಷ್ಟಾಗಿ ತಿಳಿಯದಿದ್ದ ಸ್ಥಳೀಯ ಪೊಲೀಸರು ಅಭಿಮಾನಿಗಳನ್ನು ಸುಧಾರಿಸುವಲ್ಲಿ ಹರ ಸಾಹಸ ಪಡಬೇಕಾಯಿತು. ಏನು ಹೇಳಿದರೂ, ಕೇಳದ ಅಭಿಮಾನಿಗಳಿಗೆ ಕೊನೆಗೆ ಲಾಠಿ ರುಚಿ ತೋರಿಸಿದರು. ಕಾರಿನಲ್ಲಿ ಮುಗುಳ್ನಗುತ್ತಿದ್ದ ಚಿರಂಜೀವಿ ಅವರತ್ತ ನೋಡಿ ಸಲಾಂ ಹೊಡೆದ ಪೇದೆಗಳು ಅವರನ್ನು ಬೀಳ್ಕೊಟ್ಟರು.
ಅತ್ತ ಚಿರಂಜೀವಿ ಅನಂತಪುರ ತಲುಪಿದ ನಂತರ, ಕರ್ನಾಟಕದಲ್ಲಿ ನಡೆಯುವ ಮುಂದಿನ ಚುನಾವಣೆಯಲ್ಲಿ ಪ್ರಜಾರಾಜ್ಯಂ ಪಕ್ಷ ಸ್ಪರ್ಧಿಸಲಿದೆ ಎಂದು ಚಿರಂಜೀವಿ ಬೆನ್ನು ಬಿದ್ದಿದ್ದ ಖಾಸಗಿ ವಾಹಿನಿಯಲ್ಲಿ ಘೋಷಿಸತೊಡಗಿತ್ತು. ಒಟ್ಟಿನಲ್ಲಿ ರಾಜ್ಯ ರಾಜಕಾರಣದತ್ತ ಚಿರಂಜೀವಿ ಕಣ್ಣು ಹಾಕಿರುವ ಸೂಚನೆಯಂತೂ ಸಿಕ್ಕಿದೆ. ಯಾವುದಕ್ಕೂ ಮುಂದಿನ ಚುನಾವಣೆವರೆಗೂ ಕಾಯಬೇಕು. [ಚಿರಂಜೀವಿ]