ಉಗ್ರರ ಕರಿನೆರಳು:ಕೆಆರ್ಎಸ್ ಗೆ ಬಿಗಿಭದ್ರತೆ

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಶಾಂತಿಗೆ ಭಂಗ ಉಂಟು ಮಾಡಲು ಹನ್ನೆರಡು ಮಂದಿ ಉಗ್ರರು ಸಮುದ್ರದ ಮೂಲಕ ದೇಶದೊಳಕ್ಕೆ ನುಸುಳಿರುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತದಳ ಮಾಹಿತಿ ನೀಡಿದ ಮೇರೆಗೆ ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಇಲಾಖೆಗೆ ಆದೇಶಿಸಿದ್ದಾರೆ.
ಈ ಹಿನ್ನಲೆಯಲ್ಲಿ ಕೆಆರ್ಎಸ್ ಜಲಾಶಯಕ್ಕೆ ಮೊದಲಿನಿಂದಲೂ ಬಿಗಿ ಪೊಲೀಸ್ ಭದ್ರತೆಯಿದ್ದು, ಇದೀಗ ಹೆಚ್ಚಿನ ವಿಶೇಷ ಭದ್ರತೆಯನ್ನು ಕಲ್ಪಿಸಲಾಗಿದೆ. ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರನ್ನು ಕೂಡ ತಪಾಸಣೆ ನಡೆಸಿದ ಬಳಿಕವಷ್ಟೆ ಪ್ರವಾಸಿ ತಾಣಗಳಿಗೆ ಹಾಗೂ ಕೆಆರ್ಎಸ್ ಜಲಾಶಯ, ಚಾಮುಂಡಿಬೆಟ್ಟಕ್ಕೆ ತೆರಳಲು ಅವಕಾಶ ಮಾಡಿಕೊಡಲಾಗುತ್ತಿದೆ.
ಕೊಡಗಿನ ಹಾರಂಗಿ ಜಲಾಶಯವು ಬೆಟ್ಟಗುಡ್ಡ, ಕಾಡಿನ ನಡುವೆ ಇರುವುದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಅಣ್ಣಿಗೇರಿ ಅವರು ಹಾರಂಗಿ ಜಲಾಶಯಕ್ಕೆ ಜಿಲ್ಲಾ ಮೀಸಲು ಪಡೆಯ 30 ಮಂದಿ ಪೊಲೀಸ್ ಪೇದೆ, ಒಬ್ಬರು ಎಎಸ್ಐ ಹೆಚ್ಚುವರಿಯಾಗಿ ನಿಯೋಜಿಸುವ ಮೂಲಕ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದಾರೆ.
ಹಾರಂಗಿ ಜಲಾಶಯ ಸುತ್ತಮುತ್ತ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕಣ್ಣಿಡುವಂತೆ ಪೊಲೀಸರಿಗೆ ಸೂಚಿಸಿರುವ ಡಿವೈಎಸ್ಪಿ ಜಯಪ್ರಕಾಶ್ ಅಕ್ಕರಕಿ ಅವರು ಅಪರಿಚಿತ ವ್ಯಕ್ತಿಗಳು ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಕೋರಿದ್ದಾರೆ. [ಮೈಸೂರು]












Click it and Unblock the Notifications