ಬೀದರ್ ನಿಂದ ಬೆಂಗಳೂರು ತನಕ ಚಳಿ ಕಾಟ
ಎರಡು ದಿನಗಳಿಂದ ಚಳಿಯ ತೀವ್ರತೆ ಹೆಚ್ಚುತ್ತಿದ್ದು, ಡಿ.19ರಂದು ಬೆಂಗಳೂರು ನಗರದ ಕನಿಷ್ಠ ತಾಪಮಾನ 14.2 ಡಿಗ್ರಿ ತಲುಪಿತ್ತು. ಇದರ ಪರಿಣಾಮ ಇಂದು ಕೂಡಾ ಮುಂದುವರೆದಿದ್ದು, ಅಲ್ಲಲ್ಲಿ ತುಂತುರು ಮಳೆ ಜೊತೆಗೆ ಕೊರೆಯುವ ಚಳಿಗೆ ಬೆಂಗಳೂರು ಜನತೆ ತತ್ತರಿಸಿದ್ದಾರೆ.
ಬೆಳಗಾವಿ, ಬಿಜಾಪುರ ಗಡಗಡ: ಈ ಜಿಲ್ಲೆಗಳಲ್ಲಿ ಮಧ್ಯಾಹ್ನವಾದರೂ ಬಿಸಿಲು ಕಾಣದೆ, ಮನೆಯಲ್ಲೇ ಕೌದಿ ಹೊದ್ದು ಬೆಚ್ಚಗೆ ಕೂರುವ ಸ್ಥಿತಿ ಉಂಟಾಗಿದೆ. ಕಳೆದ ಎರಡು ವಾರದಿಂದ ಕನಿಷ್ಠ ತಾಪಮಾನ 18 ಡಿಗಿ ಆಸುಪಾಸಿನಲ್ಲೇ ಸುತ್ತುತ್ತಿದೆ. ಸ್ವೆಟ್ಟರ್, ಟೋಪಿ, ಶಾಲು, ಜರ್ಕಿನ್ ಇಲ್ಲದೆ ಯಾರು ಹೊರಗೆ ಕಾಲಿಡುತ್ತಿಲ್ಲ. ಹೊಲಗಳಿಗೆ ನೀರು ಹಾಯಿಸುವುದು ಕೃಷಿಕರಿಗೆ ತೊಂದರೆಯಾಗಿದ್ದರೆ, ಹಾಲು, ಪೇಪರ್ ವಿತರಣೆ ಮಾಡುವವರು, ಕಸ ಗುಡಿಸುವವರು ಚಳಿಗೆ ತತ್ತರಿಸಿದ್ದಾರೆ. ನಗರ ಪ್ರದೇಶದ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಕೋಲ್ಡ್ ಕ್ರೀಮ್ ಗೆ ಮೊರೆ ಹೋಗಿದ್ದಾರೆ.
ವಿವಿಧ ಜಿಲ್ಲೆಗಳಲ್ಲಿನ ತಾಪಮಾನ ವಿವರ: ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಬಿ.ಪುಟ್ಟಣ್ಣ ಅವರು ಡಿಸೆಂಬರ್ ಮೊದಲ ವಾರ ನೀಡಿದ ಮುನ್ಸೂಚನೆಯಂತೆ ರಾಯಚೂರಿನಲ್ಲಿ ಚಳಿ ಕಾಟ ಮುಂದುವರೆದಿದೆ. ರಾಯಚೂರಿನಲ್ಲಿ ಕನಿಷ್ಠ ತಾಪಮಾನ 7.3 ಡಿಗ್ರಿ ದಾಖಲಾಗಿದ್ದು, ಜನತೆ ಬೆಚ್ಚುವಂತೆ ಮಾಡಿದೆ. ಬೀದರ್ ನಲ್ಲಿ 6 ಡಿಗ್ರಿ ದಾಖಲಾಗಿದೆ. ಉಳಿದಂತೆ ಬೆಳಗಾವಿ 10 ಡಿಗ್ರಿ, ಧಾರವಾಡ 10 ಡಿಗ್ರಿ, ಬಿಜಾಪುರ 6 ಡಿಗ್ರಿ, ಬಳ್ಳಾರಿ 11 ಡಿಗ್ರಿ, ಕೊಪ್ಪಳ 13 ಡಿಗ್ರಿ ಹಾಗೂ ಕೋಲಾರ 8 ಡಿಗ್ರಿ ತಾಪಮಾನ ಹೊಂದಿದೆ ಎಂದು ಹವಾಮಾನ ಇಲಾಖೆ ದಾಖಲೆಗಳು ತಿಳಿಸಿವೆ.[ಹವಾಮಾನ]