ಬೆಂಗಳೂರಿಗರನ್ನು ಕೊರೆಯುತ್ತಿರುವ ಮಾಗಿ ಚಳಿ
ಬೆಂಗಳೂರಿನಲ್ಲಿ ಸೋಮವಾರ ದಿನದ ಉಷ್ಣಾಂಶ 16.8 ಡಿ.ಸೆ ಇತ್ತು. ಆದರೆ, ಗರಿಷ್ಠ ಉಷ್ಣಾಂಶ 22 ಡಿ.ಸೆ ದಾಟಲಿಲ್ಲ. ಸೂರ್ಯ ಭಗವಾನ್ ದರ್ಶನವಂತೂ ಇಲ್ಲವೇ ಇಲ್ಲ. ಇನ್ನೆರಡು ಮೂರು ದಿನಗಳ ಕಾಲ ಸೂರ್ಯನಿಗೆ ಫುಲ್ ರೆಸ್ಟ್, ಚಳಿ ಜೊತೆಗೆ ಅಲ್ಲಲ್ಲಿ ತುಂತುರು ಮಳೆಯಾಗುವ ಸಂಭವ ಕೂಡಾ ಹೆಚ್ಚು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಡಿಸೆಂಬರ್ ತಿಂಗಳಲ್ಲಿ ನಗರದಲ್ಲಿ ಸಾಮಾನ್ಯವಾಗಿ ದಿನದ ಗರಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 17.6 ಡಿ.ಸೆ ಇರುತ್ತದೆ. ಜನವರಿ ವೇಳೆಗೆ ಉಷ್ಣಾಂಶವು 13 ಡಿ.ಸೆ ಗಿಂತಲೂ ಕಡಿಮೆಯಾಗುವ ಸಾಧ್ಯತೆಯಿದೆ. ಸಾಮಾನ್ಯವಾಗಿ ನವೆಂಬರ್ನಿಂದ ಫೆಬ್ರುವರಿ ಅಂತ್ಯದವರೆಗೆ ಚಳಿಗಾಲ ಇರುತ್ತದೆ. ಚಳಿಯ ತೀವ್ರತೆಯಿಂದ ತಪ್ಪಿಸಿಕೊಳ್ಳಲು ಮಾರ್ಚ್ವರೆಗೆ ಕಾಯಲೇಬೇಕು.
ತಮಿಳುನಾಡು ಮಳೆ ಎಫೆಕ್ಟ್?: ತಮಿಳುನಾಡಿನ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಎರಡು ದಿನಗಳಿಂದ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇದು ಉತ್ತರ ದಿಕ್ಕಿಗೆ ಚಲಿಸುವ ಸಾಧ್ಯತೆ ಇರುವುದರಿಂದ ದಕ್ಷಿಣ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪುಟ್ಟಣ್ಣ ಹೇಳಿದರು.
ರಾಯಚೂರಿಗೂ ಚಳಿ ತಟ್ಟಲಿದೆ: ಆದರೂ ಬೆಂಗಳೂರು, ಕೋಲಾರ, ತುಮಕೂರಿನಲ್ಲಿ ಇನ್ನೂ ಎರಡು ದಿನ ಮೋಡ ಮುಸುಕಿದ ವಾತಾವರಣ ಮುಂದುವರಿಯಲಿದ್ದು, ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಚಳಿಗಾಲದಲ್ಲಿ ರಾಯಚೂರು, ಗುಲ್ಬರ್ಗದಲ್ಲಿ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್ಗೆ ಇಳಿಯುತ್ತದೆ. ಬೆಂಗಳೂರು ಸುತ್ತಮುತ್ತ ಅಧಿಕ ಮಂಜು ಬೀಳುವುದರಿಂದ ನಗರದ ಹೊರ ವಲಯದಲ್ಲಿ ಚಳಿ ಹೆಚ್ಚಿರುತ್ತದೆ ಎಂದರು.