ಕಿರಣ್ ಕುಮಾರ್ ರೆಡ್ಡಿ ಆಂಧ್ರಪ್ರದೇಶದ ನೂತನ ಸಿಎಂ

ರಾಯಲಸೀಮಾ ಪ್ರಾಂತ್ಯದ ಚಿತ್ತೂರು ಜಿಲ್ಲೆಯ ತಮ್ಮ ಸ್ವಂತ ಊರಿನಿಂದ ಶಾಸಕರಾಗಿ ಆಯ್ಕೆಯಾಗಿರುವ 50 ವರ್ಷ ವಯಸ್ಸಿನ ರೆಡ್ಡಿ ಕಾಂಗ್ರೆಸ್ ವಿರುದ್ಧ ಬಂಡೆದ್ದಿರುವ ಪಕ್ಷದ ಕಡಪಾ ಲೋಕಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿಯವರ ಸವಾಲನ್ನು ಎದುರಿಸುವ ಗುರುತರ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದೆ. ದಿವಂಗತ ಮುಖ್ಯಮಂತ್ರಿ ರಾಜಶೇಖರ ರೆಡ್ಡಿಯವರ ಆಪ್ತ ಅನುಯಾಯಿ ಎಂದು ಭಾವಿಸಲಾಗಿರುವ ರೆಡ್ಡಿ ಮುಖ್ಯ ಸಚೇತಕರಾಗಿ ಸಹ ಕೆಲಸ ಮಾಡಿದ್ದಾರೆ.
ಪ್ರಧಾನ ಪ್ರತಿಪಕ್ಷ ತೆಲುಗುದೇಶಂ ವಿರುದ್ಧ ಹಾಗೂ ತಮ್ಮ ಕಟ್ಟಾ ವಿರೋಧಿ ಎನ್ ಚಂದ್ರಬಾಬು ನಾಯ್ಡು ಅವರ ವಿರುದ್ಧ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿದ ಕೀರ್ತಿ ಅವರದಾಗಿದೆ. ವೈಚಿತ್ರ್ಯವೆಂದರೆ ಕಿರಣ್ ಕುಮಾರ್ ಅವರ ತಂದೆ ದಿವಂಗತ ಅಮರನಾಥರೆಡ್ಡಿ, ಚಂದ್ರಬಾಬು ನಾಯ್ಡು ಅವರ ರಾಜಕೀಯ ಗುರುವಾಗಿದ್ದರು. ಹೈದರಬಾದಿನ ನಿಜಾಂ ಕಾಲೇಜಿನಲ್ಲಿ ಪದವಿ ಪೂರೈಸಿ ನಂತರ ಕಾನೂನು ಪದವಿ ಪಡೆದರು.
ಉತ್ತಮ ಕ್ರಿಕೆಟ್ ಆಟಗಾರರಾಗಿದ್ದ ಕಿರಣ್ಕುಮಾರ್ ರೆಡ್ಡಿ, ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ರ ಜತೆ ಆಡಿದ್ದು ಹೈದರಾಬಾದ್ ರಣಜಿ ತಂಡವನ್ನೂ ಪ್ರತಿನಿಧಿಸಿದ್ದರು. ಚಿತ್ತೂರು ಜಿಲ್ಲೆಯ ವಾಯಲ್ಪಾಡುನಿಂದ 1989ರಲ್ಲಿ ಮೊದಲ ಬಾರಿ ಆಂಧ್ರಪ್ರದೇಶ ವಿಧಾನಸಭೆಗೆ ಆರಿಸಿ ಬಂದಿದ್ದರು. 1999 ಮತ್ತು 2004ರಲ್ಲೂ ಅದೇ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.
2009ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಕಾರಣ ಅವರು ಪೀಲೇರುನಿಂದ ಸ್ಪರ್ಧಿಸಿ ಗೆದ್ದಿದ್ದರು. ಸಚಿವರಾಗುವ ಆಸೆ ಅವರಿಗೆ ಇತ್ತಾದರೂ ಚಿತ್ತೂರು ರಾಜಕೀಯದ ಲೆಕ್ಕಾಚಾರಗಳ ಕಾರಣ ಅವರಿಗೆ ಸಚಿವ ಪದವಿ ದೊರೆಯಲಿಲ್ಲ. ಬದಲಿಗೆ ಸ್ಪೀಕರ್ ಪದವಿ ಅವರನ್ನು ಅರಸಿ ಬಂದಿತು. ಕೆ ರೋಶಯ್ಯ 2009ರ ಸೆಪ್ಟೆಂಬರ್ ನಲ್ಲಿ ಮುಖ್ಯಮಂತ್ರಿಯಾದ ನಂತರ ಮತ್ತೊಮ್ಮೆ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಸಂಪುಟ ವಿಸ್ತರಣೆ ನಡೆಯಲೇ ಇಲ್ಲ.












Click it and Unblock the Notifications