ಬೈಕ್ ಸವಾರರ ಫುಡ್ ಕೂಪನ್ ತಿಂದ ಪೇದೆ

ಸಾಫ್ಟ್ ವೇರ್ ಉದ್ಯೋಗಿ ಹಾಗೂ ಆರ್ಮಿಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳಿಬ್ಬರು ಸಿಲ್ಕ್ ಬೋರ್ಡ್ ನಿಂದ ಅಲಸೂರಿಗೆ ತೆರಳುವ ಮಾರ್ಗ ಮಧ್ಯೆ ಕೋರಮಂಗಲದಲ್ಲಿ ಈ ಘಟನೆ ನಡೆದಿದೆ. ಗೊತ್ತಿದ್ದೂ, ಗೊತ್ತಿಲ್ಲದೆಯೋ ಈ ಬೈಕ್ ಸವಾರರು ಒನ್ ವೇಯಲ್ಲಿ ತೆರಳಿ ಪೊಲೀಸ್ ಪೇದೆ ಕೈಗೆ ಸಿಕ್ಕಿಬಿದ್ದಿದ್ದಾರೆ. ರಾತ್ರಿ ಹೊತ್ತು ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಮುಗಿದೇ ಹೋಯಿತು. ಕನ್ನಡ ಭಾಷೆ ಗೊತ್ತಿರುವವನಾದರೆ ಹಾಗೂ ಹೀಗೂ ತಪ್ಪಿಸಿಕೊಳ್ಳಬಹುದು. ಭಾಷೆ ಗೊತ್ತಿರದಿದ್ದರೆ ಪೊಲೀಸರಿಗೆ ಹಬ್ಬ. ಕೇಸ್ ಜಡಿಯುವುದಾಗಿ ಹೆದರಿಸಿ ಕಾಸು ಪೀಕುವ ಕೆಲಸಕ್ಕೆ ನಿಲ್ಲುತ್ತಾರೆ.
ಈ ಘಟನೆಯಲ್ಲೂ ಅದೇ ಆಗಿದೆ. ಒನ್ ವೇಯಲ್ಲಿ ತೆರಳಿ ಕಾನೂನು ಉಲ್ಲಂಘಿಸಿದ ಎಂಬ ಕಾರಣಕ್ಕೆ ಪೊಲೀಸ್ ಪೇದೆ ಏರ್ರಾಬಿರ್ರಿ ಹಾರಾಟ ಶುರುಮಾಡಿದ್ದಾನೆ. ಪಾಪ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡು ವ್ಯಕ್ತಿಗಳು ಏನ್ಮಾಡಬೇಕು. ಆತನಿಗೆ ಉಳಿದಿರುವುದು ಒಂದೇ ದಾರಿ. ಸುಮ್ಮನೆ ಕಾಸು ಕೊಟ್ಟ ಮನೆಗೆ ತೆರಳುವುದು. ಆಗ ಪೊಲೀಸ್ 600 ರುಪಾಯಿಗಳಿಗೆ ಡಿಮ್ಯಾಂಡ್ ಮಾಡಿದ್ದಾನೆ.
ಕೊನೆ ಪಕ್ಷ 200 ರುಪಾಯಿ ಆದ್ರೂ ಕೊಡು ಎಂದು ಪೇದೆ ಅಂಗಲಾಚತೊಡಗಿದ. ಹತ್ತಿರವಿದ್ದ ಫುಡ್ ಕೂಪನ್ ನನ್ನು ಪೊಲೀಸನ ಕೈಗೆ ಕೊಟ್ಟ ನಂತರ ಮನೆಗೆ ತೆರಳಬೇಕಾಯಿತು. ಇಂತಹ ಅನುಭವ ಅನೇಕ ಜನರಿಗೆ ಸಾಕಷ್ಟು ಸಲ ಆಗಿರುತ್ತದೆ. ಟ್ರಾಫಿಕ್ ಕಾನೂನು ಉಲ್ಲಂಘಿಸಿ ಪೊಲೀಸರ ಕೈಗೆ ಸಿಕ್ಕಿಬಿಟ್ಟೆ ಅಂದರೆ ಕಾಸು ಕೊಡುವವರೆಗೂ ಬಿಡುವುದಿಲ್ಲ. ಸಾಲದ್ದಕ್ಕೆ ಕೇಸ್ ಜಡಿಯುವ ಬೆದರಿಕೆ ಬೇರೆ.
ಕಾನೂನು ಉಲ್ಲಂಘಿಸಿದರೆ ಪೊಲೀಸರು ದಂಡ ತೆಗೆದುಕೊಳ್ಳಬೇಕು. ಆದರೆ, ಪೊಲೀಸರು ಮಾಡುತ್ತಿರುವ ಕೆಲಸವೇ ಬೇರೆ. ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಅವರಿಗೆ ಇಂತಹ ಅನೇಕ ದೂರುಗಳು ನಿತ್ಯ ಸಾವಿರಾರು ಬಂದು ಬೀಳುತ್ತವೆ. ಇದೊಂದು ಸಣ್ಣ ಪ್ರಕರಣ ಅಂತ ಆಯುಕ್ತರು ನಿರ್ಲಕ್ಷ ತೋರುತ್ತಾರೆ. ಅನುಭವಿಸುವುದು ಮಾತ್ರ ಜನಸಾಮಾನ್ಯರು. ಭ್ರಷ್ಟಾಚಾರ ಕುರಿತು ಸರಕಾರದ ಬಗ್ಗೆ ಮಾತನಾಡುವುದೇ ಬೇಡ. ಸ್ವತಃ ಮುಖ್ಯಮಂತ್ರಿ ಭ್ರಷ್ಟಾಚಾರದ ರಾಡಿಯೊಳಗೆ ಹೂತುಹೋಗಿದ್ದಾರೆ. ಜನರ ಸಮಸ್ಯೆಗಳನ್ನು ಯಾರ ಬಳಿಗೆ ಹೇಳಬೇಕು?












Click it and Unblock the Notifications