ಯಡ್ಡಿ ತಲೆದಂಡ? ರೆಡ್ಡಿ ರಹಸ್ಯ ಸಿಡಿ..!

ಕಳೆದ ಒಂದು ವಾರದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಬೇಕು ಎಂದು ಜೆಡಿಎಸ್ ನಾಯಕರು ನಡೆಸಿದ ಅಷ್ಟೂ ಹೋರಾಟಗಳು ಫಲ ನೀಡುವ ಕ್ಷಣಗಳು ಆರಂಭವಾಗಿವೆ. ಇಂದು ಮಧ್ಯಾಹ್ನ ಸಿಎಂ ಯಡಿಯೂರಪ್ಪ ಅವರು ಸಂಸದ ಸದಾನಂದಗೌಡ ಮತ್ತು ಆಯುನೂರು ಮಂಜುನಾಥ ಅವರೊಂದಿಗೆ ನವದೆಹಲಿಗೆ ತೆರಳಿದ್ದು, ರಾತ್ರಿ 7 ಗಂಟೆಗೆ ನಡೆಯಲಿರುವ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹಗರಣದಲ್ಲಿ ಪಾಲ್ಗೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮನೆಗೆ ಕಳುಹಿಸುವ ಎಲ್ಲ ಸಿದ್ಧತೆಗಳನ್ನು ವರಿಷ್ಠರು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸರಕಾರ ವಜಾಗೊಳಿಸಲು ರೆಡ್ಡಿ ಸಂಚು : ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಟಿವಿ 9 ವಾಹಿನಿಯೂ ಸರಕಾರ ವಜಾಗೊಳಿಸಲು ಜನಾರ್ದನರೆಡ್ಡಿ ರಾಜ್ಯಪಾಲರ ಕಾನೂನು ಸಲಹೆಗಾರ ಎನ್ನಲಾದ ಅಶೋಕ್ ಚೋಪ್ರಾ ಎನ್ನುವ ವ್ಯಕ್ತಿಯೊಂದಿಗೆ ಚರ್ಚೆ ನಡೆಸಿರುವ ರಹಸ್ಯ ಸಿಡಿ ಪ್ರಸಾರ ಮಾಡಿದ್ದು ಬಿಜೆಪಿಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ.
ಯಡಿಯೂರಪ್ಪ ಮಹಾನ್ ಸುಳ್ಳುಗಾರ. ಬಿಜೆಪಿ ಸರಕಾರ ಪತನಗೊಳಿಸಲು 15 ಕೋಟಿ ರುಪಾಯಿ ನೀಡುತ್ತೇನೆ. ಸರಕಾರ ವಜಾಗೊಳಿಸಲು ರಾಜ್ಯಪಾಲರ ಮೇಲೆ ಒತ್ತಡ ಹೇರಿ ಎಂದು ಜನಾರ್ದನರೆಡ್ಡಿ ಅವರು ಚೋಪ್ರಾ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಅರ್ಧ ಇಂಗ್ಲಿಷ್ ಇನ್ನರ್ಧ ಕನ್ನಡದಲ್ಲಿ ಸಂಭಾಷಣೆ ನಡೆದಿದೆ. ಜನಾರ್ದನರೆಡ್ಡಿ ಬಿಜೆಪಿ ಸರಕಾರದ ಸಂಪುಟ ಸಚಿವರು ಹಾಗೂ ಪ್ರಭಾವಿ ಸಚಿವರು ಆಗಿದ್ದು, ಸರಕಾರ ಪತನಗೊಳಿಸಲು ಕೈಹಾಕಿದ್ದು ಬಿಜೆಪಿಯೊಳಗೆ ಕೋಲಾಹಲ ಉಂಟಾಗಿದೆ.
2010ರ ಅಗಸ್ಟ್ 11ರಂದು ಜನಾರ್ದನರೆಡ್ಡಿ ಹಾಗೂ ಅಶೋಕ್ ಚೋಪ್ರಾ ನಡುವೆ ಸಂಭಾಷಣೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರಾತ್ರಿ 10 ಗಂಟೆ ನಂತರ ನಡೆದಿದೆ. ಸರಕಾರ ಪತನಗೊಳಿಸಲು ಎಲ್ಲ ಸಹಾಯ, ಸಹಕಾರ ನೀಡುವುದಾಗಿ ರೆಡ್ಡಿ ಚೋಪ್ರಾಗೆ ಹೇಳಿರುವುದು ಸಿಡಿಯಲ್ಲಿ ಇದೆ ಎಂದು ವಾಹಿನಿ ಪ್ರಸಾರ ಮಾಡಿದೆ.












Click it and Unblock the Notifications