ಸಿಎಂ ವಿರುದ್ಧ 61 ಬಿಜೆಪಿ ಶಾಸಕರು ಬಂಡಾಯ!
ದಿಲ್ಲಿ ಅಂಗಳದಲ್ಲಿ ಯಡಿಯೂರಪ್ಪ ಅವರ ಭೂ-ಹಗರಣ ಪ್ರತಿಧ್ವನಿಸುತ್ತಿದ್ದಂತೆಯೇ ಬಿಜೆಪಿಯಲ್ಲಿ ಅನಂತಕುಮಾರ್ ಬಣ ನಾಯಕತ್ವ ಬದಲಾವಣೆಗೆ ತೀವ್ರ ಪಟ್ಟು ಹಿಡಿದಿದೆ. ಸುಮಾರು 61 ಬಿಜೆಪಿ ಶಾಸಕರು ಯಡಿಯೂರಪ್ಪ ಅವರನ್ನು ಕೆಳಗಿಸಲು ಒಪ್ಪಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ದಿಲ್ಲಿಯಲ್ಲಿ ಕುಳಿತಿರುವ ಅನಂತಕುಮಾರ್ ತಮ್ಮ ಬೆಂಬಲಿಗ ಶಾಸಕರೊಂದಿಗೆ ಸಂಪರ್ಕ ಹೊಂದಿದ್ದಾರೆ.
ವಿಶೇಷವೆಂದರೆ, ಭೂ-ಹಗರಣದಲ್ಲಿ ತಮ್ಮ ಹೆಸರು ಬಲವಾಗಿ ಕೇಳಬರಲು ಪಕ್ಷದ ಹಿರಿಯ ಸಂಸದರೊಬ್ಬರ ಕೈವಾಡ ಎಂದು ಅನಂತಕುಮಾರ್ ಮೇಲೆ ಸಿಎಂ ಆರೋಪ ಹೊರಸಿದ್ದಾರೆ. ಈ ಬಗ್ಗೆ ನಿತಿನ್ ಗಡ್ಕರಿಗೂ ರಹಸ್ಯ ಪತ್ರ ಕಳುಹಿಸಿದ್ದಾರೆ ಎಂದು ಪ್ರಮುಖ ದಿನಪತ್ರಿಕೆಯೊಂದು ವರದಿ ಮಾಡಿದೆ.
ಈ ಮಧ್ಯೆ ಕೋಲಾರದಲ್ಲಿ ಭಾಗ್ಯಲಕ್ಷ್ಮಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಮುಖ್ಯಮಂತ್ರಿ, ಭೂ-ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವುದಾಗಿ ಘೋಷಿಸಿದ್ದಾರೆ. ನಿವೃತ್ತ ನ್ಯಾಯಮೂರ್ತಿಗಳಿಂದ ಹಗರಣದ ತನಿಖೆ ನಡೆಸಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ. ಹಗರಣದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಬಿಜೆಪಿ ಕೋರ್ ಕಮೀಟಿ ಸಭೆ ಆರಂಭವಾಗಿದೆ. ಸಭೆಯಲ್ಲಿ ನಿತಿನ್ ಗಡ್ಕರಿ, ಎಲ್ ಕೆ ಅಡ್ವಾಣಿ, ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್ ಮತ್ತು ಅರುಣ್ ಜೈಟ್ಲಿ ಉಪಸ್ಥಿತರಿದ್ದಾರೆ.