ಗನ್ ಮ್ಯಾನ್ ಬೆನ್ನಿಗೆ ಗುದ್ದಿದ ಸಿಎಂ!
ಯಾದಗಿರಿಯಲ್ಲಿ ನಡೆದ ಭಾಗ್ಯಲಕ್ಷ್ಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತೆರಳುತ್ತಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಡಿನೋಟಿಫಿಕೇಷನ್ ಗೆ ಸಂಬಂಧಿಸಿದಂತೆ ಆರೋಪಗಳನ್ನು ಎದುರಿಸುತ್ತಿರುವ ಮುಖ್ಯಮಂತ್ರಿ, ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವ ಯತ್ನಿಸಿದರು. ಮಾಧ್ಯಮದವರನ್ನು ತಡೆಯುವಲ್ಲಿ ಗನ್ ಮ್ಯಾನ್ ವಿಫಲವಾಗಿದ್ದು ಮುಖ್ಯಮಂತ್ರಿಗಳ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಇದರಿಂದ ಕುಪಿತಗೊಂಡ ಅವರು ಗನ್ ಮ್ಯಾನನಿಗೆ ಬೆನ್ನಿಗೆ ಗುದ್ದಿದರು ಎಂದು ವಾಹಿನಿ ಪ್ರಸಾರ ಮಾಡಿದೆ.
ಡಿನೋಟಿಫಿಕೇಷನ್ ಹಗರಣದಲ್ಲಿ ಸಿಎಂ ಕುಟುಂಬ ಪಾಲ್ಗೊಂಡಿರುವುದು ಈಗಾಗಲೇ ಬಹಿರಂಗಗೊಂಡಿದ್ದು, ಅವರು ಕೂಡಾ ಇದನ್ನು ಒಪ್ಪಿಕೊಂಡಿದ್ದಾರೆ. ನಾಗರಭಾವಿ, ನಾಗಶೆಟ್ಟಿಹಳ್ಳಿ, ಜಗಣಿ ಬಳಿ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಗರಣ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಸಂದರ್ಭದಲ್ಲಿ ಮಾಧ್ಯಮದವರಿಂದ ಅದೇ ಪ್ರಶ್ನೆಗಳನ್ನು ನಿರೀಕ್ಷಿಸಿದ ಮುಖ್ಯಮಂತ್ರಿಗಳು ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿರಬೇಕು. ಆಗ ಗನ್ ಮ್ಯಾನ್ ಬೆನ್ನಿಗೆ ಗುದ್ದಿದ್ದಾರೆ ಎಂದು ಅಂದಾಜಿಸಲಾಗಿದೆ.
ಭಾಗ್ಯಲಕ್ಷ್ಮಿ ಯೋಜನೆಯ ಸೀರೆ ಹಂಚಿಕೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಮುಖ್ಯಮಂತ್ರಿಗಳು ಯಥಾ ಪ್ರಕಾರ ವಿರೋಧಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆದರೆ, ಇಂದು ಮಾತ್ರ ಸಿಎಂ ಕೋಪದಲ್ಲಿರುವಂತೆ ಕಂಡಬಂದಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಕಾರ್ಯಕ್ರಮವನ್ನು ಮುಂದುವರೆಸಿಕೊಂಡು ಹೋಗುತ್ತೇವೆ. ಸುಳ್ಳು ಆರೋಪಗಳಿಗೆ ಹೆದರಲ್ಲ ಎಂದು ಅಬ್ಬರಿಸಿದರು ಎಂದು ವಾಹಿನಿ ವರದಿ ಮಾಡಿದೆ.
ನಾಗರಭಾವಿ ಡಿನೋಟಿಫಿಕೇಷನ್ ರದ್ದು : ಡಿನೋಟಿಫಿಕೇಷನ್ ಆರೋಪಗಳು ಮುಖ್ಯಮಂತ್ರಿಗಳನ್ನು ಸುತ್ತಿಕೊಳ್ಳುತ್ತಿದ್ದಂತೆಯೇ ನಾಗರಭಾವಿ ಡಿನೋಟಿಫಿಕೇಷನ್ ಅನ್ನು ಸರಕಾರ ರದ್ದು ಮಾಡಿ ಆದೇಶ ಹೊರಡಿಸಿದೆ. ನಾಗರಭಾವಿಯಲ್ಲಿ 5.13 ಎಕರೆ ಪ್ರದೇಶವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಡಿನೋಟಿಫೈ ಮಾಡಿದ್ದರು. ಕೆಟ್ಟ ಮೇಲೆ ಮುಖ್ಯಮಂತ್ರಿಗಳಿಗೆ ಬುದ್ದಿ ಬಂದಿದೆ. ಡಿನೋಟಿಫೈ ಮಾಡಿದ್ದೇಕೆ ನಂತರ ರದ್ದು ಮಾಡಿದ್ದೇಕೆ ಎಂಬುದನ್ನು ಯಡಿಯೂರಪ್ಪ ವಿವರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.