ಪಕ್ಷೇತರರ ಅನರ್ಹತೆ ವಿಚಾರಣೆಗೆ ಹೊಸ ತಿರುವು
ಹೊಸದುರ್ಗದ ಟಿಟಿ ನಾಗರಾಜ್ ಮತ್ತು ಗಂಗಾವತಿಯ ಯಮನಪ್ಪ ಎಂಬಿಬ್ಬರು, ಪಕ್ಷೇತರ ಶಾಸಕರು ನಂಬಿಕೆಗೆ ದ್ರೋಹ ಎಸಗಿದ್ದಾರೆ ಎಂದು ವಿಧಾನಸಭಾಧ್ಯಕ್ಷ ಕೆಜಿ ಬೋಪಯ್ಯ ಅವರಿಗೆ ನೀಡಲಾಗಿದ್ದ ಪತ್ರಕ್ಕೆ ಬಲವಂತವಾಗಿ ಸಹಿ ಹಾಕಿಸಿಕೊಳ್ಳಲಾಗಿತ್ತು ಎಂದು ಮಧ್ಯಂತರ ಅರ್ಜಿಯಲ್ಲಿ ತಿಳಿಸಿ ಈ ಪ್ರಕರಣಕ್ಕೆ ಹೊಸ ಸ್ವರೂಪ ನೀಡಿದ್ದಾರೆ.
ಈ ಇಬ್ಬರು ಮತ್ತು ಹಿರಿಯೂರಿನ ಬಸವರಾಜ್, ಮಳವಳ್ಳಿಯ ಲಿಂಗೇಗೌಡ ಮತ್ತು ಪಾವಗಡದ ಕೃಷ್ಣಾ ನಾಯಕ್ ಎಂಬ ಐವರು ಪಕ್ಷೇತರ ಶಾಸಕರ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಇಬ್ಬರು ಈಗ ಸರಕಾರದ ವಿರುದ್ಧ ತಿರುಗಿ ನಿಂತಿದ್ದಾರೆ. ಬಿಜೆಪಿ ಶಾಸಕರ ಅನರ್ಹತೆ ಕುರಿತಂತೆ ನೀಡಲಾಗಿರುವ ತೀರ್ಪಿನಲ್ಲಿ ಶಾಸಕರನ್ನು ಅನರ್ಹಗೊಳಿಸುವಾಗ ಸಭಾಧ್ಯಕ್ಷ ಯಾವುದೇ ದುರುದ್ದೇಶದಿಂದ ಕ್ರಮ ಕೈಗೊಂಡಿರಲಿಲ್ಲ ಎಂದು ತಿಳಿಸಲಾಗಿತ್ತು.
ನಮಗೆ ಪಕ್ಷೇತರರ ವಿರುದ್ಧ ದೂರು ನೀಡುವ ಯಾವುದೇ ಉದ್ದೇಶವಿರಲಿಲ್ಲ. ಆದರೆ ಈಡಿಗರ ಸಮಾವೇಶಕ್ಕೆಂದು ಬೆಂಗಳೂರಿಗೆ ಅ.9ರಂದು ಬಂದಾಗ ಮಂಡಳಿಗಳಿಗೆ ಸದಸ್ಯರನ್ನಾಗುವ ಆಮಿಷ ತೋರಿಸಿ ಬಲವಂತವಾಗಿ ಸುರೇಶ್ ಕುಮಾರ್ ಅವರ ಸಮ್ಮುಖದಲ್ಲಿ ಸಹಿ ಹಾಕಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಮಧ್ಯಂತರ ಅರ್ಜಿಗೆ ಪ್ರತಿ ಹೇಳಿಕೆ ನೀಡಲು ಸರಕಾರಕ್ಕೆ ಕಾಲಾವಕಾಶ ನೀಡಲಾಗಿದೆ. ಶುಕ್ರವಾರ ಕರ್ನಾಟಕ ಹೈಕೋರ್ಟಿನಲ್ಲಿ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್, ನ್ಯಾ. ಎಎಸ್ ಬೋಪಣ್ಣ ಮತ್ತು ನ್ಯಾ. ಎಸ್ ಅಬ್ಧುಲ್ ನಜೀರ್ ಅವರನ್ನೊಳಗೊಂಡ ವಿಭಾಗೀಯ ಪೀಠದೆದಿರು ವಿಚಾರಣೆಗೆ ಬರಲಿದೆ.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7