ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದನವಾಳು ಹತ್ಯಾಕಾಂಡ : 20 ಜನರಿಗೆ ಜೀವಾವಧಿ

By Prasad
|
Google Oneindia Kannada News

Badanavalu massacre : 20 sentenced to life imprisonment
ಮೈಸೂರು, ನ. 4 : ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಭಾರೀ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ ಬದನವಾಳು ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ 20 ಆರೋಪಿಗಳಿಗೆ 6ನೇ ನೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ.

1993ರ ಮಾರ್ಚ್ 25ರಂದು ವೀರಶೈವ ಮತ್ತು ದಲಿತರ ನಡುವೆ ನಡೆದ ಕೋಮು ಸಂಘರ್ಷದಲ್ಲಿ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದ 3 ದಲಿತರು ಹತ್ಯೆಯಾಗಿದ್ದರು. ಈ ಘಟನೆಯಲ್ಲಿ ಒಟ್ಟು 23 ಜನರನ್ನು ಬಂಧಿಸಲಾಗಿತ್ತು. ಅವರಲ್ಲಿ ಮೂವರು ಈಗಾಗಲೆ ಮೃತರಾಗಿದ್ದಾರೆ. ಉಳಿದ 20 ಜನ ಈಗ ಶಿಕ್ಷೆಗೆ ಗುರಿಯಾಗಿದ್ದಾರೆ. ಜೀವಾವಧಿ ಶಿಕ್ಷೆಯ ಜೊತೆಗೆ 15 ಸಾವಿರ ರು. ದಂಡ ನೀಡಬೇಕೆಂದು ಆದೇಶಿಸಲಾಗಿದೆ.

ಹಿನ್ನೆಲೆ : ಬದನವಾಳು ಗ್ರಾಮದಲ್ಲಿರುವ ಸಿದ್ದೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಗ್ರಾಮದ ಎಲ್ಲರೂ ದೇಣಿಗೆ ನೀಡಬೇಕೆಂದು ಆಗ್ರಹಿಸಲಾಗಿತ್ತು. ಆದರೆ, ದೇವಸ್ಥಾನದಲ್ಲಿ ಪ್ರವೇಶ ನೀಡದ ಕಾರಣ ದಲಿತರು ದೇಣಿಗೆ ನೀಡಲು ವಿರೋಧ ವ್ಯಕ್ತಪಡಿಸಿದ್ದರು. ಮತ್ತು ದೇವಸ್ಥಾನದೊಳಗೆ ಪ್ರವೇಶ ನೀಡಿದರೆ ಮಾತ್ರ ದೇಣಿಗೆ ನೀಡುವುದಾಗಿ ಷರತ್ತು ಹಾಕಿದ್ದರು.

ಷರತ್ತಿಗೆ ಒಪ್ಪಿದ ವೀರಶೈವ ಜನಾಂಗದವರು ದೇವಸ್ಥಾನದ ಮರುಉದ್ಘಾಟನಾ ಸಮಾರಂಭದ ಹೊತ್ತಿಗೆ ದಲಿತರಿಗೆ ಪ್ರವೇಶ ನಿರಾಕರಿಸಿದರು. ಇದರಿಂದ ರೊಚ್ಚಿಗೆದ್ದ ದಲಿತರು ಸಮಾರಂಭ ರದ್ದಾಗುವಂತೆ ಮಾಡಿದ್ದರು. ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ ವೀರಶೈವರು 1993ರ ಮಾರ್ಚ್ 25ರಂದು ಕ್ರಿಕೆಟ್ ಪಂದ್ಯಾವಳಿ ನಂತರ ಮರಳುತ್ತಿದ್ದ ದಲಿತರ ಮೇಲೆ ವೀರಶೈವರು ಮುಗಿಬಿದ್ದು ನಾರಾಯಣ ಸ್ವಾಮಿ, ಮಧುಕರ ಮತ್ತು ನಟರಾಜು ಎಂಬ ಮೂವರನ್ನು ಹತ್ಯೆ ಮಾಡಿದ್ದರು.

ಈ ಘಟನೆ ಮುಂದೆ ರಾಜಕೀಯ ಬಣ್ಣವನ್ನೂ ಪಡೆದುಕೊಂಡಿತು. ಎಲ್ಲೆಡೆಯಿಂದ ಬಂದ ವಿರೋಧ ಮತ್ತು ಒತ್ತಾಯಕ್ಕೆ ಮಣಿದಿದ್ದ ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸಿಬಿಐ ತನಿಖೆಗೆ ಆದೇಶಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ಸತತ 17 ವರ್ಷಗಳ ಕಾಲ ವಿಚಾರಣೆ ನಡೆದು ನ್ಯಾಯಾಧೀಶ ಎಮ್ಎಫ್ ಮಳವಳ್ಳಿ ಅವರು ಈಗ ತೀರ್ಪು ಪ್ರಕಟಿಸಿದ್ದಾರೆ. ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸುವುದಾಗಿ ಅಪರಾಧಿಗಳ ಪರ ವಕೀಲರು ಹೇಳಿದ್ದಾರೆ.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X