ಇಂದಿನ ರಾಜಕೀಯ ವ್ಯವಸ್ಥೆಗೆ ನಿವೇನಂತೀರಿ?
ಇವತ್ತಿನ ಪರಿಸ್ಥಿತಿಯಲ್ಲಿ ರಾಜಕಾರಣಿಗಳನ್ನು ಏಕೆ ದೂರಬೇಕು? ಇಂದಿನ ಈ ಸ್ಥಿತಿಗೆ ನಾವೆಲ್ಲಾ ಹೊಣೆಗಾರರು ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಬೇಕು? ಕರ್ನಾಟಕ ಬಿಹಾರವಾಗಿ ಹೋಯ್ತು ಎಂದು ಬಾಯಿಬಾಯಿ ಬಡಿದುಕೊಳ್ಳುತ್ತಿದ್ದೇವೆ? ರಾಜಕೀಯ ಕುಲಗೆಟ್ಟು ಹೋಯಿತು? ಇವರು ಜನಪ್ರತಿಗಳು ಎನ್ನಲು ನಾಚಿಕೆ ಆಗುತ್ತೆ, ನಾಲಾಯಕ್... ವಿಧಾನಸಭೆ ದೇವರ ಮನೆ ಇದ್ದಂತೆ. ಇಂತಹ ಮನೆಯನ್ನು ಕಾಲಿನಿಂದ ಒದೆಯೋದೆ, ಪೊಲೀಸರ ಮೇಲೆ ಕೈಮಾಡೋದು, ಮಾಜಿ ಸಚಿವನೊಬ್ಬ ಸದನದಲ್ಲಿ ಅಂಗಿ ಹರಿದುಕೊಂದು ಮಂಗನಂತೆ ಕುಣಿದಾಡುವುದು ಒಂದೇ ಎರಡೇ ಎಂದು ಆಕ್ರೋಶ ವ್ಯಕ್ತಪಡಿಪಡಿಸುತ್ತೇವೆ?
ಬಿಜೆಪಿ ಆಪರೇಷನ್ ಕಮಲದ ಮೂಲದ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಖರೀದಿಸದರಂತೆ? ಒಬ್ಬೊಬ್ಬ ಶಾಸಕನ ತಲೆಗೆ 25, 30, 50 ಕೋಟಿ ರುಪಾಯಿ ಕಟ್ಟಿ ಕುದುರೆ, ಕತ್ತೆ ವ್ಯಾಪಾರ ನಡೆಸಿರಂತೆ? ಮೂರು ಬಿಟ್ಟ ಈ ರಾಜಕಾರಣಿಗಳು ಊರಿಗೆ ದೊಡ್ಡರಾಗುತ್ತಿದ್ದಾರೆ. ಅಬಕಾರಿ ಮಂತ್ರಿ ರೇಣುಕಾಚಾರ್ಯನೆ ಇದಕ್ಕೆ ಪಕ್ಕ ನಿದರ್ಶನ. ಬಂಡಾಯದ ಬಾವುಟ ಹಾರಿದ್ದೆ ಆ ಮನುಷ್ಯನಿಂದ ಚೆನ್ನೈಗೆ ಶಾಸಕರ ದಂಡನ್ನು ಕರೆದುಕೊಂಡು ಹೋಗಿದ್ದೆ ಈ ಮಹಾನುಭಾವ. ಆದರೂ ಈತ ಸಂಪುಟ ಪ್ರಬಲ ಖಾತೆಯೊಂದರ ಮಂತ್ರಿ. ನಾಚಿಕೆ ಆಗಬೇಕಿದ್ದು ಯಾರಿಗೆ ?
ಜನರ ಭಾವನೆಗಳಿಗೆ ಬೆಲೆ ಕೊಡದ ಜನಪ್ರತಿನಿಧಿಗಳು ತಮ್ಮನ್ನು ತಾವು ಮಾರಿಕೊಳ್ಳುತ್ತಿದ್ದಾಗ ಮತದಾರ ಪ್ರಭುಗಳು, ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಾದ ನಾವೆಲ್ಲರೂ ಮೂಕಪ್ರೇಕ್ಷಕರಂತೆ ನೋಡಿಕೊಂಡು ಸುಮ್ಮನೆ ಕುಳಿತಿದ್ದೇವೆ. ಹೀಗೆ ಮುಂದುವರೆದರೆ ನಾಳಿನ ಕುದುರೆ ವ್ಯಾಪಾರದಲ್ಲಿ ರಾಜ್ಯವನ್ನೇ ಒತ್ತೆ ಇಟ್ಟರೂ ಅಚ್ಚರಿಯೇನಿಲ್ಲ. ಇದ್ಯಾವುದನ್ನೂ ಪ್ರತಿಭಟಿಸಿದ ನಾವುಗಳು ಮನಸ್ಸಿನಲ್ಲಿ ಅಯ್ಯೋ ರಾಜಕಾರಣ ಹಾಗಾಯಿತು, ಹೀಗಾಯಿತು. ಕುಲಗೆಟ್ಟುಹೋಯಿತು. ಎಲ್ಲ ಭ್ರಷ್ಟರೇ ತುಂಬಿಕೊಂಡಿರುವಾಗ ರಾಜಕೀಯ ನೆಟ್ಟಗೆ ಇರಲು ಸಾಧ್ಯವೇ ಎಂದು ಕೊರಗುತ್ತಿದ್ದೇವೆ. ಹೀಗೆ ಹತಾಶ ಮನಸ್ಥಿತಿಯಿಂದ ಹೊರಬಂದು ವ್ಯವಸ್ಥೆ ಸುಧಾರಿಸುವಂತ ಹೊಸ ಹೊಸ ಐಡಿಯಾಗಳನ್ನು ಏಕೆ ನೀಡಬಾರದು?
ಅಯ್ಯೋ ನಮ್ಮ ಮಾತನ್ನು ಯಾರು ಕೇಳುತ್ತಾರೆ ಎಂಬ ಉಡಾಫೆ ಮಾತು ಬೇಡ. ನಾವು ಮತ ಚಲಾಯಿಸಿದರೆ ಅವರು ಜನಪ್ರತಿನಿಧಿಗಳು ಆಗೋದು. ಹೀಗಿರುವಾಗ ಪ್ರಜಾಪ್ರಭುತ್ವದ ಜುಟ್ಟು ಮತದಾರರ ಕೈಯಲ್ಲಿದೆ. ನಾವೇ ಇಲ್ಲಿ ಅಂಪೈರ್ ಗಳು. ಹೀಗೆ ಸುಮ್ಮನೆ ಕಾಲ ತಳ್ಳಿದರೆ ಜನಸಾಮಾನ್ಯರನ್ನೂ ಕುದುರೆ ವ್ಯಾಪಾರಕ್ಕೆ ಇಡಲು ಈ ಜನನಾಯಕರು ಹೇಸಲ್ಲ. ಆದ್ದರಿಂದ ಬೇಗ ಎಚ್ಚರಗೊಳ್ಳುವುದು ಸರಿಯಲ್ಲವೇ.
ಪ್ರಜಾಪ್ರಭುತ್ವ ವ್ಯವಸ್ಥೆಯೇ ಬೇಡ. ಮಿಲಿಟರಿ ಆಡಳಿತ ಬರಲಿ, ಅಧಿಕಾರಿಶಾಹಿಗಳ ಸರಕಾರ ಇರಲಿ, ಉದ್ಯಮಿಗಳ ಕೈಲಿ ಸರಕಾರ ಇರಲಿ. ರಾಷ್ಟ್ರಪತಿ ಆಡಳಿತ ಉತ್ತಮ. ಅಥವಾ ಈಗಿರುವ ಕಾನೂನಿನಲ್ಲಿ ಕೆಲ ಬದಲಾವಣೆ ತರಬೇಕು. ಅದು ಹೇಗೆ ? ಶಾಸಕನಾಗಿ ಆಯ್ಕೆಯಾದ ವ್ಯಕ್ತಿ ಐದು ವರ್ಷ ಆಯ್ಕೆಯಾದ ಪಕ್ಷದಲ್ಲೇ ಇರಬೇಕು. ಹಾಗೊಂದು ವೇಳೆ ಪಕ್ಷಾಂತರ ಮಾಡಿದರೆ, 10 ವರ್ಷಗಳ ಕಾಲ ಆತ ಮತ್ತು ಆತನ ಕುಟುಂಬಿಕರು ಯಾರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಹೀಗೆ ಅನೇಕ ಚಿಂತನೆಗಳು ನಿಮ್ಮದು ಆಗಿರುತ್ತದೆ.
ಅಟೋ ಡ್ರೈವರ್ ಕಿರಿಕಿರಿ ಮಾಡಿದ, ರಾತ್ರಿಯೆಲ್ಲಾ ನಾಯಿ ಬೊಗಳಿತು ಎಂದು ಬಿಬಿಎಂಪಿ ವಿರುದ್ಧ ಅಂತರ್ಜಾಲದಲ್ಲಿ ಡಿಬೆಟ್ ಮಾಡುವ ನಾವುಗಳು ಇದೀಗ ನಮ್ಮ ಮನೆ ಮುರಿದಿದೆ. ವ್ಯವಸ್ಥೆ ದಿವಾಳಿ ಅಂಚು ಬಂದು ತಲುಪಿದೆ. ಇಂತಹ ಸಮಯದಲ್ಲಿ ಯಾವ ವ್ಯವಸ್ಥೆ ಸೂಕ್ತ ಎಂದು ಚರ್ಚೆ ಮಾಡಬೇಕಿದೆ. ಹೀಗಾಗಿ, ಶಾರ್ಟಾಗಿ, ಸ್ವೀಟಾಗಿ ಕಮೆಂಟ್ ಬಾಕ್ಸ್ ನಲ್ಲಿ ವ್ಯವಸ್ಥೆ ಹೇಗಿರಬೇಕು ಎಂಬುದನ್ನು ತಿಳಿಸಿ. ನನ್ನ ಪ್ರಕಾರ, ಪ್ರಜಾಪ್ರಭುತ್ವ ವ್ಯವಸ್ಥೆ ಶ್ರೇಷ್ಠ. ಇದೀಗ ಉದ್ಭವಿಸಿರುವ ಕಂಟಕಗಳಿಗೆ ಕಡಿವಾಣ ಹಾಕುವಂತ ಕಾನೂನು ಜಾರಿಗೊಳಿಸಬೇಕು. ನಿವೇನಂತೀರಿ.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7