ಸಿಎಂ ತಲೆದಂಡ ನಿಶ್ಚಿತ: ಬಾಲಚಂದ್ರ ಜಾರಕಿಹೊಳಿ

ಬೆಂಗಳೂರು, ಅ.10: ರಾಜ್ಯ ಸರಕಾರದ ವಿರುದ್ಧ ಭಿನ್ನಮತದ ಬಾವುಟ ಹಾರಿಸಿರುವ ಗ್ಯಾಂಗ್ ನ ಲೀಡರ್, ಬಾಲಚಂದ್ರ ಜಾರಕಿಹೊಳಿ ಅವರು ಮತ್ತೆ ಸಿಎಂ ತಲೆದಂಡಕ್ಕೆ ಆಗ್ರಹಿಸಿದ್ದಾರೆ. ದುಡ್ಡು, ಅಧಿಕಾರದ ಆಸೆ ತೋರಿಸಿ ನಮ್ಮನ್ನು ಖರೀದಿಸಲು ಯಡಿಯೂರಪ್ಪ ಬಣಕ್ಕೆ ಸಾಧ್ಯವಿಲ್ಲ. ನಮ್ಮ ಪರ ಶಾಸಕರ ಸದಸ್ಯತ್ವ ಅನರ್ಹಗೊಳಿಸಿದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಖಚಿತ ಎಂದು ಗೋವಾ ವಿಮಾನ ನಿಲ್ದಾಣದಲ್ಲಿ ಶನಿವಾರ ರಾತ್ರಿ ಹೇಳಿದ್ದಾರೆ.
ರೇಣುಕಾಚಾರ್ಯರ ಆಪ್ತರಾಗಿದ್ದ ಬೇಳೂರು ಗೋಪಾಲಕೃಷ್ಣ ಅವರು ಈಗಾಗಲೇ 19 ಮಂದಿ ಶಾಸಕರು ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ತಯಾರಿದ್ದಾರೆ ಎಂದು ಹೇಳಿದ ನಂತರ ಸುದ್ದಿಗಾರರೊಡನೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಹಾಗೂ ಆನಂದ್ ಆಸ್ನೋಟಿಕರ್ ಅವರು ಸಿಎಂ ತಲೆದಂಡವಾಗದೆ ಜನತೆಗೆ ಸೌಖ್ಯವಿಲ್ಲ ಎಂದರು.
ಯಡಿಯೂರಪ್ಪ ನೇತೃತ್ವದ ಸರಕಾರವನ್ನು ಉರುಳಿಸುವುದಷ್ಟೇ ತಮ್ಮ ಉದ್ದೇಶ. ಯಾರು ಕೂಡ ತಮಗೆ ಆಮಿಷವೊಡ್ಡಿಲ್ಲ. ನಮ್ಮನ್ನು ಯಾರು ಕಟ್ಟಿಹಾಕಿಲ್ಲ. ಗೂಂಡಾಗಳು ಯಾರು ಬಂದಿಲ್ಲ. ನಮ್ಮನ್ನು ಸುಮಾರು 140 ಕೋಟಿಗೂ ಅಧಿಕ ಹಣ ನೀಡಿ ಖರೀದಿಸಲು ಬಿಜೆಪಿ ಮುಖಂಡರೇ ಯತ್ನಿಸಿದರು ಎಂದು ಹೇಳಿದರು.
ಶಂಕರಲಿಂಗೇಗೌಡ, ಎಸ್.ಕೆ.ಬೆಳ್ಳುಬ್ಬಿ, ಲಿಂಗಸೂಗೂರಿನ ಮಾನಪ್ಪ ವಜ್ಜಲ, ಗುಲ್ಬರ್ಗದ ನರಸಿಂಹ ಗೌಡ ನಾಯಕ್ ಸೇರಿದಂತೆ ಒಟ್ಟು 19 ಮಂದಿ ಇದ್ದೇವೆ, ಎಲ್ಲರೂ ಒಗ್ಗಟ್ಟಾಗಿದ್ದು, ಎಲ್ಲರ ನಿರ್ಧಾರ ಅ.11ರಂದು ಜನತೆಗೆ ತಿಳಿಯಲಿದೆ ಎಂದು ಆಸ್ನೋಟಿಕರ್ ಹೇಳಿದ್ದಾರೆ. ಇದೀಗ ಬಂದ ಸುದ್ದಿಯ ಪ್ರಕಾರ ಲಿಂಗಸೂಗೂರು ಬಿಜೆಪಿ ಶಾಸಕ ಮಾನಪ್ಪ ವಜ್ಜಲ ಅವರನ್ನು ಅಪಹರಿಸಲಾಗಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ದ ರಾಯಚೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೋಮವಾರ ವಿಶ್ವಾಸ ಮತ ಯಾಚಿಸುವ ಅಧಿವೇಶನ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಕಾನೂನು ಮತ್ತು ಶಿಸ್ತು ಪಾಲನೆ ದೃಷ್ಟಿಯಿಂದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯನ್ನು ತಮ್ಮ ಅಧಿಕೃತ ನಿವಾಸ 'ಕೃಷ್ಣ' ದಲ್ಲಿ ಶನಿವಾರ ಬಳಗ್ಗೆ ಕರೆದಿದ್ದರು. ವಿಧಾನಸೌಧದ ಸುತ್ತಮುತ್ತ ಸೋಮವಾರದಿಂದ ಮೂರು ದಿವಸಗಳ ಕಾಲ ನಿಷೇಧಾಜ್ಞೆ ಹೇರಲಾಗಿದೆ.
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications