ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.1ರಿಂದ ಮೈಸೂರಿಗೆ ಕಿಂಗ್ ಫಿಷರ್ ವಿಮಾನಯಾನ

By Mahesh
|
Google Oneindia Kannada News

Mysore-Bangalore kingfisher flight daily oct 1
ಮೈಸೂರು, ಸೆ.28: ಅಕ್ಟೋಬರ್‌ 1ರಂದು ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ನಾಗರೀಕ ವಿಮಾನಯಾನ ಆರಂಭವಾಗಲಿದೆ. ಖಾಸಗಿ ವಿಮಾನಯಾನ ಸಂಸ್ಥೆ ಕಿಂಗ್‌ಫಿಶರ್‌ನ ಪ್ರಥಮ ಚಾರ್ಟರ್ಡ್‌ ವಿಮಾನ ಬೆಂಗಳೂರಿನಿಂದ ಪ್ರಯಾಣಿಕರನ್ನು ಹೊತ್ತು ನಗರಕ್ಕೆ ಆಗಮಿಸಲಿದೆ. ಈ ಮೂಲಕ ಮೈಸೂರಿನ ಅರಸರಾದ ಜಯ ಚಾಮರಾಜ ಒಡೆಯರ್ ಅವರು ಕಂಡ ಕನಸು ನನಸಾಗಲಿದೆ.

ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದ ಸಲಹಾ ಸಮಿತಿ ಅಧ್ಯಕ್ಷರಾದ ಸಂಸದ ಎಚ್‌. ವಿಶ್ವನಾಥ್‌ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಬೆಂಗಳೂರಿನಿಂದ ಮಧ್ಯಾಹ್ನ 12ಗಂಟೆಗೆ ಹೊರಡುವ ಕಿಂಗ್‌ಫಿಶರ್‌ ವಿಮಾನ ಮಧ್ಯಾಹ್ನ 12.45ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಮತ್ತೆ ಅದೇ ವಿಮಾನ ಮಧ್ಯಾಹ್ನ 2.45ಕ್ಕೆ ಹೊರಟು 3.30ಕ್ಕೆ ಬೆಂಗಳೂರು ವಿಮಾನ ನಿಲ್ದಾಣ ತಲುಪುತ್ತದೆ. ಪ್ರತಿ ಟಿಕೆಟ್ ಬೆಲೆ 2 ಸಾವಿರ ರುಗಳಾಗಿರುತ್ತದೆ. ಈ ಸೇವೆ ದಸರೆಗೆಸೀಮಿತವಲ್ಲ. ದಸರೆ ನಂತರವೂ ಈ ಸೇವೆ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.

ಮೈಸೂರು ಮಹರಾಜರ ಕನಸು: 1947ರಲ್ಲಿ ಮಂಡಕಳ್ಳಿ ಗ್ರಾಮದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಅಂದಿನ ಮಹಾರಾಜರು 168 ಎಕರೆ ಭೂಪ್ರದೇಶವನ್ನು ಮಂಜೂರು ಮಾಡಿದ್ದರು. 2005ರಲ್ಲಿ ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ರಾಜ್ಯ ಸರಕಾರದ ಮಧ್ಯೆ ಆದ ಒಡಂಬಡಿಕೆ ಪ್ರಕಾರ ರಾಜ್ಯ ಸರಕಾರ ಅಗತ್ಯವಿರುವ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ನಾಗರಿಕ ವಿಮಾನಗಳ ಹಾರಾಟಕ್ಕೆ ಬೇಕಾದ ಪೂರಕ ವಾತಾವರಣವನ್ನು ಸೃಷ್ಟಿಸಿದೆ.

ಅದರ ಫಲವಾಗಿ ಅ 1ರಂದು ಮಧ್ಯಾಹ್ನ 12.45ಕ್ಕೆ ಕಿಂಗ್‌ಫಿಶರ್‌ ಸಂಸ್ಥೆಯ ವಿಮಾನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಈ ಮೊದಲ ನಾಗರಿಕ ವಿಮಾನದಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಇನ್ನಿತರ ಗಣ್ಯರು ಆಗಮಿಸುವ ನಿರೀಕ್ಷೆ ಇದೆ. ಈ ಮೊದಲ ವಿಮಾನದಲ್ಲಿ ಪ್ರಯಾಣ ಮಾಡುವವರನ್ನು ಸ್ವಾಗತಿಸಲು ಜಿಲ್ಲಾಡಳಿತ, ಸ್ಥಳೀಯ ಜನಪ್ರತಿನಿಧಿ ಗಳು ವಿಮಾನ ನಿಲ್ದಾಣದಲ್ಲಿ ಹಾಜರಿರುತ್ತಾರೆ ಎಂದು ವಿವರಿಸಿದರು.

ಕಿಂಗ್‌ಫಿಶರ್‌ ಸಂಸ್ಥೆ ಮಾಲೀಕ ವಿಜಯ್‌ಮಲ್ಯ ಅವರು ಕನ್ನಡಿಗರಾಗಿದ್ದು, ರಾಜ್ಯಸಭಾ ಸದಸ್ಯರೂ ಆಗಿದ್ದಾರೆ. ಕನ್ನಡಿಗರಾಗಿ ಮೈಸೂರು ವಿಮಾನನಿಲ್ದಾಣಕ್ಕೆ ತಮ್ಮದೇ ಸಂಸ್ಥೆಯ ನಾಗರಿಕ ವಿಮಾನಗಳ ಹಾರಾಟ ಆರಂಭಿಸುವ ಮೂಲಕ ಬದ್ಧತೆ ಪ್ರದರ್ಶಿಸಿದ್ದಾರೆ. ಜೊತೆಗೆ ರಾಜ್ಯ ಸರಕಾರ ಹಾಗೂ ನಮ್ಮೆಲ್ಲರ ಕೋರಿಕೆಗೂ ಅವರು ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಮಂಡಕಳ್ಳಿ ವಿಮಾನ ನಿಲ್ದಾಣದಿಂದ ನಾಗರಿಕ ವಿಮಾನಗಳ ಹಾರಾಟಕ್ಕೆ ಜೆಟ್‌ ಏರ್‌ವೆಸ್‌ ಕೂಡ ಮುಂದೆ ಬಂದಿದೆ. ಸದ್ಯದಲ್ಲೇ ಅದೂ ಕೂಡ ಕಿಂಗ್‌ಫಿಶರ್‌ನಂತೆ ತನ್ನ ಸೇವೆ ಆರಂಭಿಸಲಿದೆ. ಬೆಂಗಳೂರಿಗೆ ಮಾತ್ರ ಆರಂಭವಾಗಿರುವ ಈ ಸೇವೆ, ಮುಂದೆ ಕೇರಳದ ಕೊಚಿನ್‌, ಗೋವಾಕ್ಕೂ ವಿಸ್ತರಣೆಯಾಗಲಿದೆ. ವಿಮಾನಗಳಿಗೆ ಪ್ರಯಾಣಿಕರ ಒತ್ತಡ ಗಮನಿಸಿ ವಿಮಾನ ಸೇವೆ ಇನ್ನಷ್ಟು ವಿಸ್ತಾರವಾಗಲಿದೆ ಎಂದು ವಿಶ್ವನಾಥ್ ತಿಳಿಸಿದರು.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X