ವಿಮ್ಸ್ ವೈದ್ಯರ ಸಾಧನೆ ಮುಂಗೈ ಮರುಜೋಡಣೆ
ತಿಪ್ಪೇಸ್ವಾಮಿಗೆ ಅಪಘಾತವಾಗಿದ್ದು ಆಗಸ್ಟ್ 16 ರಂದು. ಅಪಘಾತವಾದ ಕೂಡಲೇ ರಾಯದುರ್ಗದ ಸ್ಥಳೀಯ ವೈದ್ಯ ಡಾ. ಸತೀಶ್ ಅವರಲ್ಲಿ ಹೋಗಿದ್ದ ತಿಪ್ಪೇಸ್ವಾಮಿಗೆ ಅವರು, ಈತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ತುಂಡಾದ ಎಡಗೈ ಮುಂಗೈ ಅನ್ನು ಸ್ಚಚ್ಚಗೊಳಿಸಿ, ಪ್ಲಾಸ್ಟಿಕ್ ಕವರಿನಲ್ಲಿ ಕಟ್ಟಿ, ನಂತರ ಐಸ್ ಕಂಟೈನರ್ನಲ್ಲಿ ಇರಿಸಿ ತುರ್ತಾಗಿ ಬಳ್ಳಾರಿಯ ವಿಮ್ಸ್ಗೆ ದಾಖಲಾಗುವಂತೆ ಶಿಫಾರಸ್ಸು ಮಾಡಿದರು.
ಗಾಯಾಳು ತಿಪ್ಪೇಸ್ವಾಮಿ ಕೂಡ ದುಡಿದುಣ್ಣುವ ಈ ವಯಸ್ಸಿನಲ್ಲಿ ಮುಂಗೈಯನ್ನು ಕಳೆದುಕೊಳ್ಳದೇ ಮುಂಗೈ ಮರುಜೋಡಣೆ ಆಗುತ್ತದೆ ಎನ್ನುವ ವಿಶ್ವಾಸದಲ್ಲೇ ಡಾ. ಸತೀಶ್ ಅವರ ಸಲಹೆಯನ್ನು ಚಾಚೂತಪ್ಪದೇ ಪಾಲಿಸಿದನು. ಕಾರಣ ಆತನಿಗೆ ಎಡಗೈ ಮುಂಗೈ ಮರುಜೋಡಣೆ ಆಗಿದ್ದು, ಈಗಾಗಲೇ ಬೆರಳುಗಳು ಚಲನಾ ಶಕ್ತಿಯನ್ನು ಪಡೆದಿರುವುದು ವಿಶೇಷ. ಮತ್ತು ವೈದ್ಯ ಲೋಕದ ಸಾಧನೆ ಆಗಿದೆ.
ಗಾಯಾಳು ತಿಪ್ಪೇಸ್ವಾಮಿ ಕತ್ತರಿಸಿದ ಎಡಗೈ ಮುಂಗೈ ಪುನರ್ ಜೋಡಣೆ ಆಗುತ್ತದೆ ಎನ್ನುವ ಕನಸುಕಟ್ಟಿಕೊಂಡೇ ಬಳ್ಳಾರಿಯ ವಿಮ್ಸ್ಗೆ (ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ)ಗೆ ಬಂದಾಗ ಕೂಡ ಆತನಲ್ಲಿ ಕನಸು ನನಸಾಗುವ ವಿಶ್ವಾಸ, ಭರವಸೆಗಳೇ ಇರಲಿಲ್ಲ. ಆದರೆ, ಇಂದು ಆತನಿಗೆ ಮುಂಗೈ ಮರು ಪಡೆದು ಇಡೀ ವೈದ್ಯಕೀಯ ವ್ಯವಸ್ಥೆಯ ಮೇಲೆ ಅಪಾರ ವಿಶ್ವಾಸ ಮೂಡಿದೆ. ನಂಬಿಕೆ - ಭರವಸೆಗಳು ಹುಟ್ಟಿವೆ.
ವಿಮ್ಸ್ಗೆ ದಾಖಲಾದ ತಿಪ್ಪೇಸ್ವಾಮಿಯ ಸ್ಥಿತಿಯನ್ನು ಗಮನಿಸಿದ ವಿಮ್ಸ್ನ ನಿರ್ದೇಶಕ ಡಾ|| ದೇವಾನಂದ, ಅಧೀಕ್ಷಕ ಡಾ|| ವಿದ್ಯಾಧರ ಕಿನ್ನಾಳ ಅವರು, ಈತನಿಗೆ ಶಸ್ತ್ರಚಿಕಿತ್ಸೆ ಮಾಡಿ ಕತ್ತರಿಸಿದ ಎಡಗೈ ಮುಂಗೈಯನ್ನು ಮರುಜೋಡಿಸುವ ಸವಾಲನ್ನು ಸ್ವೀಕರಿಸ ಶಸ್ತ್ರಚಿಕಿತ್ಸೆಗೆ ಮುಂದಾದರು. ಈ ಜವಾಬ್ದಾರಿಯನ್ನು ಪ್ಲಾಸ್ಟಿಕ್ ಸರ್ಜರಿ ವೈದ್ಯ ಡಾ|| ಸೋಮಶೇಖರ ಸಮಗಂಡಿ ಅವರಿಗೆ ವಹಿಸಿದರು.
ಡಾ. ಸೋಮಶೇಖರ ಸಮಗಂಡಿ ಅವರ ನೇತೃತ್ವದಲ್ಲಿ 9 ವೈದ್ಯರ ತಂಡ ಆಗಸ್ಟ್ 16 ರಂದೇ ರಾತ್ರಿ 9.30 ರಿಂದ ಬೆಳಗ್ಗೆ 8.30 ರ ವರೆಗೆ ಸತತ 11 ತಾಸು ಶಸ್ತ್ರಚಿಕಿತ್ಸೆ ನಡೆಸಿ ತಿಪ್ಪೇಸ್ವಾಮಿಗೆ ಮುಂಗೈಯನ್ನು ಮರುಜೋಡಣೆ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ.
ಶಸ್ತ್ರಚಿಕಿತ್ಸೆ ನಡೆಸಿದ ಕ್ರಮ:ಡಾ. ಸೋಮಶೇಖರ ಸಮಗಂಡಿ ನೇತೃತ್ವದಲ್ಲಿ ಪ್ರಾರಂಭದಲ್ಲಿ ಎಲುಬು ಕೀಲುಗಳ ತಜ್ಞರ ಸಹಾಯದಿಂದ ಎಲುಬುಗಳನ್ನು ಕೆ - ವೈರ್ (k - wire)ಗಳ ಮೂಲಕ ಜೋಡಿಸಿ, ಕೈ ಅನ್ನು ಭದ್ರಪಡಿಸಿ ಅದರಲ್ಲಿ ಇರುವ ರಕ್ತ ನಾಳಗಳು, ಸ್ಪರ್ಶ ನರಗಳು, ಮತ್ತು ಬೆರಳಾಡಿಸುವ ನರಗಳನ್ನು ಮೈಕ್ರೋಸ್ಕೋಪಿನ ನೆರವಿನಿಂದ ಹಂತಹಂತವಾಗಿ ಜೋಡಿಸುವಲ್ಲಿ ಯಶಸ್ವಿ ಆದರು.
ಡಾ. ಸೋಮಶೇಖರ ಸಮಗಂಡಿ ಅವರು, ಈ ಶಸ್ತ್ರ ಚಿಕಿತ್ಸೆಯು ತಮಗೆ ಪ್ರಯೋಗಕ್ಕೆ ದೊರೆತಂತಾಗಿದೆ. ಆರಂಭದಲ್ಲಿ ಆಸ್ಪತ್ರೆಗೆ ದಾಖಲಾದಾಗ ತಿಪ್ಪೇಸ್ವಾಮಿ ಮಾನಸಿಕವಾಗಿ ಕುಗ್ಗಿಹೋಗಿ ಖಿನ್ನನಾಗಿದ್ದ. ಆತನಿಗೆ ಮಾನಸಿಕ ಸ್ಥೈರ್ಯ ತುಂಬಿ, ಶಸ್ತ್ರಚಿಕಿತ್ಸೆ ಮಾಡಲಾಯಿತು. ಇನ್ನು 3-4 ತಿಂಗಳೊಳಗೆ ಪೂರ್ಣ ಪ್ರಮಾಣದಲ್ಲಿ ಗುಣಮುಖವಾಗಲಿದ್ದಾನೆ.
ಯಾವುದೇ ಅಪಘಾತಗಳು ಸಂಭವಿಸಿದಾಗ ತುಂಡರಿಸಿದ, ಕತ್ತರಿಸಿದ ಭಾಗಗಳನ್ನು ಎಸೆಯದೇ, ತಕ್ಷಣವೇ ಸ್ಚಚ್ಚಗೊಳಿಸಿ ಪ್ಲಾಸ್ಟಿಕ್ ಕವರಿನಲ್ಲಿ ಕಟ್ಟಿ, ಐಸ್ ಕಂಟೈನರ್ನಲ್ಲಿ ಹಾಕಿ ಅಪಘಾತ ಸಂಭವಿಸಿದ 6 ಗಂಟೆಗಳೊಳಗೆ ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆಗೆ ತರಬೇಕು ಎಂದು ಅವರು ಹೇಳಿದ್ದಾರೆ.
ವೈದ್ಯರ ತಂಡ:ಡಾ. ಸೋಮಶೇಖರ ಸಮಗಂಡಿ ಅವರು ಈ ಶಸ್ತ್ರಚಿಕಿತ್ಸೆಯ ನೇತೃತ್ವವಹಿಸಿದ್ದು, ಡಾ. ದೇವಾನಂದ, ಡಾ. ವಿದ್ಯಾಧರ ಕಿನ್ನಾಳ್, ಡಾ. ಬಾಲಸುಬ್ರಮಣ್ಯಂ, ಡಾ. ಕಿರಣ್ ಚಂದನ್, ಡಾ. ಪ್ರಭಂಜನ್ ಕುಮಾರ್, ಡಾ. ಬಸವರೆಡ್ಡಿ, ಡಾ. ಸಂದೀಪ, ಸ್ಟಾಫ್ ನರ್ಸ್ ಮಲ್ಲೇಶ ಅವರು ಪಾಲ್ಗೊಂಡಿದ್ದರು.