ಮದನಿ ಬಂಧನ : ಮಂಗಳೂರಿನಲ್ಲಿ ಕಟ್ಟೆಚ್ಚರ
2008ರ ಜುಲೈ 25ರಂದು ನಡೆದ ಭೀಕರ ಸರಣಿ ಸ್ಫೋಟದ ಆರೋಪಿ ಮದನಿಗೆ ಮಂಗಳೂರಿನಲ್ಲಿ ಅನೇಕ ಬೆಂಬಲಿಗರು ಇದ್ದಾರೆ ಎಂಬ ಮುನ್ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಮದನಿಯನ್ನು ಕೇರಳದಲ್ಲಿ ಕರ್ನಾಟಕ ಪೊಲೀಸರು ಆಗಸ್ಟ್ 16ರಂದು ಬಂಧಿಸಿದ್ದರು. ನಿನ್ನೆಯೇ ಆತನನ್ನು ಬೆಂಗಳೂರಿಗೆ ಕರೆತರಲಾಗಿದೆ.
ಕೋಮು ಗಲಭೆ ಮಂಗಳೂರಿನಲ್ಲಿ ಹೊಸದೇನಲ್ಲ. ಅದರಲ್ಲೂ ಕೇರಳದ ಪ್ರಭಾವಿ ರಾಜಕಾರಣಿ ಮತ್ತು ಮುಸ್ಲಿಂ ಧರ್ಮ ಪ್ರತಿಪಾದಕ ಅಬ್ದುಲ್ ನಾಸಿರ್ ಮದನಿಗೆ ಮಂಗಳೂರಿನಲ್ಲಿ ಅನೇಕ ಬೆಂಬಲಿಗರು ಇರುವುದು ತಿಳಿದುಬಂದಿದೆ. ಆತನ ಬಂಧನ ಇಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಹದಗೆಡಿಸಬದೆಂದು ಪೊಲೀಸ್ ಇಲಾಖೆ ಈ ಮುನ್ನೆಚ್ಚರಿಕೆ ತೆಗೆದುಕೊಂಡಿದೆ.
ಬೆಂಗಳೂರು ವರದಿ : ಅಬ್ದುಲ್ ಮದನಿಯನ್ನು ಇಂದು ಬೆಂಗಳೂರಿನ ಒಂದನೇ ಹೆಚ್ಚುವರಿ ದಂಡಾಧಿಕಾರಿ ವೆಂಕಟೇಶ್ ಹುಲಗಿಯವರ ಮುಂದೆ ಹಾಜರುಪಡಿಸಲಾಯಿತು. ಹತ್ತು ದಿನಗಳ ಕಾಲ ಅಂದರೆ ಆಗಸ್ಟ್ 26ರವರೆಗೆ ಆತನನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಮದನಿಯನ್ನು ರಹಸ್ಯ ಸ್ಥಳವೊಂದರಲ್ಲಿ ಬಂಧಿಸಿಡಲಾಗಿದ್ದು, ಬೆಂಗಳೂರು ಸರಣಿ ಸ್ಫೋಟದಲ್ಲಿ ಆತನ ಕೈವಾಡಕ್ಕೆ ಸಂಬಂಧಿಸಿದಂತೆ ಪೊಲೀಸರು ಇಂದು ವಿಚಾರಣೆ ನಡೆಸಿದರು. ಆತನಿರುವ ಸ್ಥಳವನ್ನು ಭದ್ರತೆಯ ಕಾರಣ ಪೊಲೀಸರು ಬಹಿರಂಗಪಡಿಸುತ್ತಿಲ್ಲ. ಬೆಂಗಳೂರು ಸ್ಫೋಟ ಪ್ರಕರಣದಲ್ಲಿ 32 ಆರೋಪಿಗಳ ಆರೋಪ ಪಟ್ಟಿಯಲ್ಲಿ 31ನೆಯವನಾಗಿರುವ ಮದನಿಗೆ ಎಲ್ಲ ರೀತಿಯ ವೈದ್ಯಕೀಯ ನೆರವು ಮತ್ತು ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕೆಂದು ಮ್ಯಾಜಿಸ್ಟ್ರೇಟ್ ಪೊಲೀಸರಿಗೆ ಆದೇಶ ನೀಡಿದ್ದಾರೆ.