ಹುಬ್ಬಳ್ಳಿಯ ಬೆಂಗೇರಿ ಬಾವುಟಗಳಿಗೆ ಭಾರೀ ಬೇಡಿಕೆ
ಬೆಂಗೇರಿಯಲ್ಲಿರುವ ಖಾದಿ ಮತ್ತು ಗ್ರಾಮೋದ್ಯಮ ಖಾದಿ ಬಾವುಟಕ್ಕಾಗಿ ಬರುತ್ತಿರುವ ಅಪಾರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ಖಾದಿ ಬಾವುಟಗಳ ಉತ್ಪಾದನೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.
ಭಾರತದ ಸಂವಿಧಾನದಲ್ಲಿ ಉಲ್ಲೇಖದಂತೆ ಮತ್ತು ಭಾರತೀಯ ಸ್ಟಾಂಡರ್ಡ್ಸ್ ಬ್ಯೂರೋದ ನಿಯಮಗಳಿಗೆ ತಕ್ಕಂತೆ ರಾಷ್ಟ್ರಧ್ವಜವನ್ನು ಉತ್ಪಾದಿಸುತ್ತಿರುವ ಗ್ರಾಮೋದ್ಯಮ ನಾನಾ ಅಳತೆಯ ಬಾವುಟಗಳ ಉತ್ಪಾದನೆಯಲ್ಲಿ ತೊಡಗಿದೆ. ಬೇಡಿಕೆ ಅಪಾರವಾಗಿರುವುದರಿಂದ ಅಲ್ಲಿನ ಕಾರ್ಮಿಕರಿಗೆ ಬಿಡುವಿಲ್ಲದ ರಾಷ್ಟ್ರದ ಕೆಲಸ.
ಪ್ರಾರಂಭ : ಮಹಾತ್ಮ ಗಾಂಧಿ ಅವರ ಸ್ವದೇಶಿ ಚಳವಳಿಯಿಂದ ಪ್ರೇರಿತರಾಗಿ ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ವೆಂಕಟೇಶ್ ಮಾಗಡಿ ಅವರು 1957ರಲ್ಲಿ ಈ ಉದ್ಯಮಕ್ಕೆ ಅಡಿಪಾಯ ಹಾಕಿದರು. ಬೇಡಿಕೆಗಳಿಗೆ ಅನುಗುಣವಾಗಿ ಉತ್ತರ ಕರ್ನಾಟಕದಾದ್ಯಂತ ಒಟ್ಟು 52 ಇಂತಹ ಘಟಕಗಳು ರಾಷ್ಟ್ರಧ್ವಜ ನಿರ್ಮಾಣದಲ್ಲಿ ತೊಡಗಿವೆ.
1957ರಲ್ಲಿ ಇದನ್ನು ಪ್ರಾರಂಭಿಸಿದಾಗ ವೆಂಕಟೇಶ್ ಅವರ ಮನದಲ್ಲಿದ್ದದ್ದು ಸ್ವಯಂ ಉದ್ಯೋಗ ಮತ್ತು ಖಾದಿಯ ಬಳಕೆಯನ್ನು ಹೆಚ್ಚಿಸುವುದಾಗಿತ್ತು. ಇದರೊಂದಿಗೆ ಜನರಲ್ಲಿ ರಾಷ್ಟ್ರಪ್ರೇಮವನ್ನು ಉದ್ದೀಪಿಸುವ ಮಹತ್ವಾಕಾಂಕ್ಷೆಯನ್ನೂ ಅವರು ಹೊಂದಿದ್ದರು. ವೆಂಕಟೇಶ್ ಅವರ ದೇಶಪ್ರೇಮಕ್ಕೆ ಬಿಎಸ್ ಪಾಟೀಲ್ ಎಂಬುವರಿಂದ ಬೆಂಬಲ ಸಿಗದೇ ಹೋಗಿದ್ದರೆ ಇಂದು ರಾಷ್ಟ್ರಧ್ವಜವನ್ನು ಜಗತ್ತಿಗೇ ನೀಡುವ ಮಹತ್ ಕಾರ್ಯ ಅವರಿಗೆ ದೊರೆಯುತ್ತಿರಲಿಲ್ಲ.
ಬಿಎಸ್ ಪಾಟೀಲ್ ಅವರ ಪ್ರಯತ್ನದಿಂದಾಗಿ ರಾಷ್ಟ್ರಧ್ವಜವನ್ನು ಉತ್ಪಾದಿಸುವ ಅನುಮತಿ ವೆಂಕಟೇಶ್ ಅವರಿಗೆ ಭಾರತೀಯ ಸ್ಟಾಂಡರ್ಡ್ಸ್ ಬ್ಯೂರೋದಿಂದ ದೊರೆಯುವಂತಾಯಿತು. ಇದು ಸುಲಭದ ಕಾರ್ಯವೂ ಆಗಿರಲಿಲ್ಲ. ಬ್ಯೂರೋದ ಮಾನದಂಡಕ್ಕೆ ತಕ್ಕಂತೆ ಇಲ್ಲದಿದ್ದರೆ ಉತ್ಪನ್ನವೇ ತಿರಸ್ಕೃತವಾಗುತ್ತದೆ. ಅಂಥದಹಲ್ಲಿ ಇಷ್ಟು ವರ್ಷಗಳಿಂದ ಗ್ರಾಮೋದ್ಯೋಗ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿದೆ.
ಖಾದಿಯ ರಾಷ್ಟ್ರಧ್ವಜಗಳನ್ನು ಧಾರವಾಡ ಬಳಿಯ ಗರಗದಲ್ಲಿಯೂ ಉತ್ಪಾದಿಸಲಾಗುತ್ತಿದೆ.