ಮಾಲೂರು, ಬಂಗಾರಪೇಟೆ ನೀರಿನ ಕದನ
ಈ ಯೋಜನೆಯನ್ನು ಕುಡಿಯುವ ನೀರಿಗೆ ಮಾತ್ರ ಸೀಮಿತಗೊಳಿಸುವಂತೆ ಹಾಗೂ ಯೋಜನೆಯನ್ನು ಕೊಂಚಮಟ್ಟಿಗೆ ಪರಿಷ್ಕರಿಸುವಂತೆ ನಿರ್ದೇಶಿಸಿ ಏಕ ಸದಸ್ಯ ಪೀಠ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿತು.
ಹಿನ್ನೆಲೆ: ಕೋಲಾರ ಜಿಲ್ಲೆಯ ಬೂದಿಕೋಟೆ ಬಳಿ ನಿರ್ಮಿಸಲಾಗಿರುವ ಮಾರ್ಕಂಡೇಯ ಜಲಾಶಯದಿಂದ ಮಾಲೂರಿಗೆ ಕುಡಿಯುವ ನೀರು ಪೂರೈಸಲು 20 ಕೋಟಿ ರೂಗಳ ಯೋಜನೆಯೊಂದನ್ನು ಸರ್ಕಾರ ರೂಪಿಸಿದೆ.
ಈ ಯೋಜನೆ ಜಾರಿಗೊಳಿಸುವ ಮೂಲಕ ಮಾಲೂರು ಹಾಗು ಸುತ್ತಮುತ್ತಲ ಗ್ರಾಮಗಳ ಜನರ ಕುಡಿಯುವ ನೀರಿನ ಬವಣೆ ನೀಗಿಸುವುದು ಈ ಯೋಜನೆಯ ಉದ್ದೇಶ. ಆದರೆ ಈ ಯೋಜನೆ ಜಾರಿಗೆ ಬಂಗಾರಪೇಟೆಯ ನಾಗರಿಕರು ತೀವ್ರ ವಿರೋಧವ್ಯಕ್ತ ಪಡಿಸುತ್ತಿದ್ದು ಯೋಜನೆ ಜಾರಿಗೆ ಬಂದರೆ ಬಂಗಾರಪೇಟೆಗೆ ಕುಡಿಯುವ ನೀರು ಪೂರೈಕೆಗೆ ತೊಂದರೆ ಎದುರಾಗಲಿದೆ ಎಂಬುದು ಅಲ್ಲಿನ ನಾಗರಿಕರ ವಾದ.
ಈ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೊಳಿಸಲು ಹೊರಟಿರುವ ಯೋಜನೆಯನ್ನು ವಿರೋಧಿಸಿ ಬಂಗಾರಪೇಟೆಯ ನಾಗರಿಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ನ ಏಕ ಸದಸ್ಯ ನ್ಯಾಯಪೀಠ ಯೋಜನೆಗೆ ತಡೆ ಆಜ್ಞೆ ನೀಡಿತ್ತು.
ಈ ತಡೆ ಆಜ್ಞೆಯನ್ನು ತೆರವುಗೊಳಿಸುವಂತೆ ಕೋರಿ ಮಾಲೂರು ನಾಗರಿಕರು ಮೇಲ್ಮನವಿ ಸಲ್ಲಿಸಿದ್ದರು. ಮಂಗಳವಾರ ಈ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ಈ ಮೊದಲು ಏಕ ಸದಸ್ಯ ನ್ಯಾಯ ಪೀಠ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ ತೀರ್ಪು ನೀಡಿತು.
ಇದರಿಂದಾಗಿ ಯೋಜನೆ ಜಾರಿಗೆ ಇದ್ದ ಅಡೆತಡೆಗಳು ನಿವಾರಣೆ ಆದಂತಾಗಿದೆ. ಬರದ ಬೇಗೆಯಿಂದ ತತ್ತರಿಸುತ್ತಿರುವ ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಜನತೆ ಕುಡಿಯುವ ನೀರಿನ ಸಮರ್ಪಕ ಸೌಲಭ್ಯವಿಲ್ಲದೇ ಪರದಾಡುತ್ತಿದ್ದಾರೆ. ಈ ಯೋಜನೆ ಜಾರಿಗೊಂಡಲ್ಲಿ ಮಾಲೂರು ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ.