ಕೊಪ್ಪಳದಲ್ಲಿ ಕೈ ಕೋಳ ವಿವಿಧೆಡೆ ಕರವೇ ಪ್ರತಿಭಟನೆ
ಡಿಜಿಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ನಂತರ ಗೃಹ ಸಚಿವ ವಿಎಸ್ ಆಚಾರ್ಯ ಹಾಗೂ ಡಿಜಿಪಿ ಅಜಯ್ ಕುಮಾರ್ ಸಿಂಹ ಅವರನ್ನು ಭೇಟಿ ಮಾಡಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಸವಣೂರಿನಲ್ಲೂ ಪ್ರತಿಭಟನೆ: ಕರ್ನಾಟಕ ರಕ್ಷಣಾ ವೇದಿಕೆಯ ಕೊಪ್ಪಳ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಮೇಲೆ ಪೊಲೀಸರು ಹಲ್ಲೆ ನಡೆಸಿರುವುದು ಖಂಡನೀಯ ಎಂದು ತಿಳಿಸಿರುವ ತಾಲೂಕ್ ಅಧ್ಯಕ್ಷ ಮ್ಲಲಾರೆಪ್ಪ ತಳ್ಳಿಹಳ್ಳಿ, ಸರಕಾರ ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆಯನ್ನು ಹತ್ತಿಕ್ಕಲು ಮುಂದಾಗಿದೆ. ಕನ್ನಡದ ಸೇವಕರ ಕೈಗಳಿಗೆ ಸರಕಾರಿ ಬೇಡಿ ತೊಡಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸವಣೂರಿನ ಭರಮಲಿಂಗೇಶ್ವರ ವೃತ್ತದಲ್ಲಿ ಮಂಗಳವಾರ ರಾತ್ರಿ 8 ಗಂಟೆಗೆ ಟೈರ್ಗಳಿಗೆ ಬೆಂಕಿ ಹಚ್ಚಿದ ಕ.ರ.ವೇ ಕಾರ್ಯಕರ್ತರು, ವ್ಯವಸ್ಥೆಯ ವಿರುದ್ದ ಘೋಷಣೆಗಳನ್ನು ಕೂಗಿ ಪ್ರತಿರೋಧ ವ್ಯಕ್ತಪಡಿಸಿದರು.
ಘಟನೆ ಹಿನ್ನೆಲೆ : ಕೊಪ್ಪಳ ನಗರದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 63 ರಸ್ತೆ ಅಗಲೀಕರಣದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಕರವೇ ವಿರೋಧ ವ್ಯಕ್ತಪಡಿಸಿತ್ತು. ಶ್ರೀಮಂತರ ಹಿತಕ್ಕಾಗಿ ಈ ಯೋಜನೆ ಕೈಗೊಳ್ಳಲಾಗಿದೆ ಎಂದು ಕರವೇ ಪ್ರತಿಭಟನೆ ನಡೆಸಿತ್ತು. ಈ ಸಂದರ್ಭದಲ್ಲಿ ಕನ್ನಡಪರ ಕಾರ್ಯಕರ್ತರಿಗೆ ಕೈಕೋಳ ತೊಡಿಸಿ ಪೊಲೀಸರು ಎಳೆದೊಯ್ದಿದ್ದರು.