ಅಟೋ ಚಾಲಕರ ಸಂಘಗಳ ನಡುವೆ ಮಾರಾಮಾರಿ

ಅಟೋ ಸಂಘಟನೆಗಳ ಮಾರಾಮಾರಿ
ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂ ಕೆ ಅಯ್ಯಪ್ಪ ಶುಕ್ರವಾರ ಕರೆದಿದ್ದ ಸಭೆಯಲ್ಲಿ ಅಟೋ ಚಾಲಕರ 36 ಸಂಘಟನೆಗಳ ನಾಯಕರು ಭಾಗವಹಿಸಿದ್ದರು. ಕನಿಷ್ಠ ದರ ನಿಗದಿ ಸಂಬಂಧ ಒಮ್ಮತ ಮೂಡದಿದ್ದಾಗ ಸಂಘರ್ಷ ಆರಂಭವಾಯಿತು. ಅಟೋ ಚಾಲಕರ ಕ್ರಿಯಾಸಮಿತಿಯ ಮೊಹಮ್ಮದ್ ಅಬ್ಬಾಸ್ ಕನಿಷ್ಠ 17 ರುಪಾಯಿ ನಿಗದಿ ಮಾಡಿ ಎಂದು ಸಲಹೆ ಮನವಿ ಮಾಡಿಕೊಂಡಿದ್ದು, ಸಂಘರ್ಷಕ್ಕೆ ಎಡೆ ಮಾಡಿ ಕೊಟ್ಟಿತು.
ಅಟೋ ಪ್ರಯಾಣ ದರವನ್ನು ಕನಿಷ್ಠ 20 ರುಪಾಯಿ ಮತ್ತು ಪ್ರತಿ ಕಿಮೀ.ಗೆ 10 ರುಪಾಯಿ ನಿಗದಿಪಡಿಸಬೇಕೆಂದು ಅಟೋ ಚಾಲಕರ ಆಗ್ರಹವಾಗಿತ್ತು. ಈ ದರ ನಿಗದಿ ಸಾಧ್ಯವಾಗದು, ಕನಿಷ್ಠ 16 ರುಪಾಯಿ ಕನಿಷ್ಠ ದರ ನಿಗದಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿ ಹೇಳಿದರು. ಜಿಲ್ಲಾಧಿಕಾರಿಗಳ ಮಾತಿಗೆ ಚೌಕಾಶಿ ಆರಂಭವಾಗಿತ್ತು. ಮಾತುಕತೆಗಳು ಮುಂದುವರೆದಿದ್ದವು. ಈ ಮಧ್ಯೆ ಅಬ್ಬಾಸ್ 17 ರುಪಾಯಿ ನಿಗದಿ ಮಾಡಿ ಎಂದು ಹೇಳಿದ್ದು ರಾದ್ಧಾಂತಕ್ಕೆ ಕಾರಣವಾಯಿತು.
ತಕ್ಷಣವೇ ಅಬ್ಬಾಸ್ ಸಲಹೆಯನ್ನು ಒಪ್ಪಿದ ಜಿಲ್ಲಾಧಿಕಾರಿಗಳು ಅಟೋರಿಕ್ಷಾ ಕನಿಷ್ಠ ದರ 17 ರುಪಾಯಿ ಎಂದು ಹೇಳಿ ಹೊರನಡೆದರು. ಇದು ಉಳಿದ ಅಟೋ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಯಿತು. ಆಕ್ರೋಶಗೊಂಡ ಇತರೆ ಅಟೋ ಸಂಘಟನೆಗಳ ನಾಯಕರು ಅಬ್ಬಾಸ್ ನನ್ನು ತೀವ್ರವಾಗಿ ಥಳಿಸಿದರು. ತಕ್ಷಣವೇ ಪೊಲೀಸರು ಮಧ್ಯೆ ಪ್ರವೇಶಿಸಿ ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣ ತಂದರು.












Click it and Unblock the Notifications