ಪ್ರಧಾನಿ ಬಳಿಗೆ ಬೆಳಗಾವಿ ವಿವಾದ ಒಯ್ದ ಮಹಾ ಸಿಎಂ
ಗಡಿ ವಿವಾದ ಕುರಿತು ನಿರ್ಧಾರ ಕೈಗೊಳ್ಳುವ ಸಂಬಂಧ ಹಾಗೂ ಮರಾಠಿ ಭಾಷಿಕ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಘೋಷಿಸಬೇಕೆಂಬ ಕುರಿತು ಬುಧವಾರ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾಣ್ ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ.
ಮಹಾ ಸಿಎಂ ಅಶೋಕ್ ಚವಾಣ್ ಅವರ ನೇತೃತ್ವದ 30 ಮಂದಿಯ ನಿಯೋಗದಲ್ಲಿ ಉಪ ಮುಖ್ಯಮಂತ್ರಿ ಛಗುನ್ ಭುಜ್ ಬಲ್, ಎನ್ ಸಿ ಪಿಯ ಮಧುಕರ್ ಪಿಛಡ್, ಶಿವಸೇನಾದ ಸುಭಾಷ್ ದೇಸಾಯಿ, ಪಿಡಬ್ಲ್ಯುಪಿ ನಾಯಕ ಎನ್ ಡಿ ಪಾಟೀಲ್, ಬಿಜೆಪಿಯ ಪಾಂಡುರಂಗ್ ಫುಂಡ್ಕರ್ , ಎಂಎನ್ ಎಸ್ ಶಾಸಕ ನಂದಗೋಂವಕರ್ ಹಾಗೂ ಎಸ್ಪಿಯ ಅಬು ಆಜ್ಮಿ ಮುಂತಾದವರು ಇದ್ದಾರೆ.
ಉಭಯ ರಾಜ್ಯಗಳ ನಡುವಿನ ಗಡಿ ವಿವಾದ ಇತ್ಯರ್ಥವಾಗುವವರೆಗೂ ಬೇರೆ ಪರಿಹಾರವೇ ಇಲ್ಲ. ಹೀಗಾಗಿ ಕರ್ನಾಟಕದಲ್ಲಿರುವ 865 ಮರಾಠಿ ಭಾಷಿಕ ಗ್ರಾಮಗಳನ್ನು ಸುಪ್ರೀಂಕೋರ್ಟ್ ತೀರ್ಪು ಹೊರಬೀಳುವವರೆಗೆ ಕೇಂದ್ರಾಡಳಿತ ಪ್ರದೇಶಗಳಿಗೆ ಒಳಪಡಿಸಿ ಆದೇಶ ಹೊರಡಿಸಬೇಕೆಂಬ ಅನಿವಾರ್ಯತೆಯನ್ನು ಪ್ರಧಾನಿಗೆ ಮನವರಿಕೆ ಮಾಡಿಕೊಡುವುದಾಗಿ ಚೌಹಾಣ್ ತಿಳಿಸಿದರು.