ಘಟಾನುಘಟಿಗಳ ಮಾತಿನ ಸಮರಕ್ಕೆ ಸದನ ಸಜ್ಜು
ಚರ್ಚೆಗೆ ಬರಲಿರುವ ಪ್ರಮುಖ ವಿಷಯಗಳು: ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ರಾಜೀನಾಮೆ, ನಾಳೆ ಆಸ್ಪತ್ರೆಯಿಂದ ಬಿಡುಗಡೆಯಾಗಲಿರುವ ಅತ್ಯಾಚಾರ ಆರೋಪಿ ಹಾಲಪ್ಪನ ಕಥೆ, ಹಾವೇರಿ ಗೋಲಿಬಾರ್ ನ್ಯಾ. ಜಗನ್ನಾಥ್ ಶೆಟ್ಟಿ ವರದಿ, ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದು, ಆಸರೆ ಯೋಜನೆಯಲ್ಲಿನ ಲೋಪ ದೋಷಗಳು, ಸಾಧನಾ ಸಮಾವೇಶದ ಖರ್ಚುವೆಚ್ಚ,, ಬಿತ್ತನೆ ಬೀಜ ಅವ್ಯವಹಾರ, ಕುಡಿಯುವ ನೀರಿಗೆ ಎದ್ದಿರುವ ಹಾಹಾಕಾರ.. ಹೀಗೆ ಅನೇಕಾನೇಕ ಸಮಸ್ಯೆಗಳಪಟ್ಟಿಯನ್ನು ಪ್ರತಿಪಕ್ಷಗಳು ತಯಾರಿಸಿಕೊಂಡಿವೆ.
ಬಿಜೆಪಿಯೂ ಸಮರಕ್ಕೆ ಸಿದ್ಧ: ಎರಡು ವರ್ಷ ಅಧಿಕಾರ ಪೂರೈಸಿದ ಸಂಭ್ರಮದಲ್ಲಿರುವ ಬಿಜೆಪಿ ಸರ್ಕಾರದ ಚುಕ್ಕಾಣಿ ಹಿಡಿದಿರುವ ಯಡಿಯೂರಪ್ಪ ಅವರು ಕೂಡ ಪ್ರತಿಪಕ್ಷಗಳ ಆಂತರಿಕ ಕಚ್ಚಾಟ, ಹುಳುಕುಗಳನ್ನು ಎತ್ತಿ ತೋರಿಸಲು ನಿರ್ಧರಿಸಿದ್ದಾರೆ. ಎರಡು ವರ್ಷಗಳ ಸಾಧನೆ ಪಟ್ಟಿಯನ್ನು ಸದನದಲ್ಲಿ ಮಂಡಿಸಿ, ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಸನ್ನದ್ಧರಾಗಿದ್ದಾರೆ. ಕಾಂಗ್ರೆಸ್ ನಿಂದ ನೆರೆ ಪರಿಹಾರ ನಿಧಿ ದುರ್ಬಳಕೆ ಪ್ರಮುಖ ಆಸ್ತ್ರವಾಗುವ ಎಲ್ಲಾ ಸಾಧ್ಯತೆಗಳಿವೆ.
ಹಲವು ವಿಧೇಯಕಗಳ ಮಂಡನೆ: ಸುಮಾರು 25 ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಅಕ್ರಮ ಸಕ್ರಮ ವಿಧೇಯಕ ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ವಿಧೇಯಕಗಳು ಮಂಡನೆಯಾಗಲಿದ್ದು, ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ಪರಸ್ಪರ ಕೆಸರೆರಚಾಟದಲ್ಲಿ ವಿಧೇಯಕಗಳ ಬಗ್ಗೆ ಚರ್ಚೆ ನಡೆಯುವುದು ಸಾಧ್ಯವೇ ಎಂಬ ಅನುಮಾನ ಶ್ರೀಸಾಮಾನ್ಯನನ್ನು ಕಾಡುತ್ತಿದೆ.