ರೈಲ್ವೆ ನೇಮಕಾತಿ ಬಹುಕೋಟಿ ಹಗರಣಕ್ಕೆ ಹೊಸ ತಿರುವು

ರೈಲ್ವೆ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಬಹುಕೋಟಿ ಅವ್ಯವಹಾರವನ್ನು ಸಿಬಿಐ ಶುಕ್ರವಾರ ಬಯಲು ಮಾಡಿತ್ತು. ಹಣಕ್ಕಾಗಿ ರೈಲ್ವೆ ನೇಮಕಾತಿ ಪ್ರಶ್ನೆಪತ್ರಿಕೆಗಳನ್ನು ಮಾರಿಕೊಂಡ ಎಂಟು ಮಂದಿ ಭ್ರಷ್ಟ ಅಧಿಕಾರಿಗಳನ್ನು ಸಿಬಿಐ ಬಂಧಿಸಿತ್ತು. ಬಂಧಿತರಲ್ಲಿ ಮುಂಬೈ ಆರ್ ಆರ್ ಬಿಯ ಮುಖ್ಯಸ್ಥ ಎಸ್ ಎಂ ಶರ್ಮಾ ಅವರ ಪುತ್ರ ವಿವೇಕ್, ರಾಯ್ಪುರದ ಹಿಂದಿನ ರೈಲ್ವೆ ವಿಭಾಗೀಯ ಹೆಚ್ಚುವರಿ ವ್ಯವಸ್ಥಾಪಕ ಜಗನ್ನಾಥಮ್ ಸೇರಿದ್ದರು.
ಮುಂಬೈ, ಬೆಂಗಳೂರು, ರಾಯ್ಪುರ, ಕೋಲ್ಕತ್ತ ಹಾಗೂ ಹೈದರಾಬಾದ್ ನಲ್ಲಿ ಸಿಬಿಐ ಏಕಕಾಲಕ್ಕೆ ದಾಳಿ ಮಾಡಿತ್ತು. ಅಸಿಸ್ಟೆಂಟ್ ಲೋಕೊ ಪೈಲಟ್ ಹಾಗೂ ಅಸಿಸ್ಟೆಂಟ್ ಸ್ಟೇಶನ್ ಮಾಸ್ಟರ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ನಡೆದ ಬಹುಕೋಟಿ ಅವ್ಯವಹಾರವಿದು.
ಬಹುಕೋಟಿ ಹಗರಣದ ನಂಟು ಬೆಂಗಳೂರಿನವರೆಗೂ ವಿಸ್ತರಿಸಿದೆ. ಬೆಂಗಳೂರಿನ ಹೋಟೆಲ್ ಒಂದರಲ್ಲಿ ಅವಿತಿದ್ದ ಜಗನ್ನಾಥ್ ಅವರನ್ನು ಸಿಬಿಐ ಬಂಧಿಸಿತ್ತು. ಇವರು ಇತ್ತೀಚಗಷ್ಟೇ ರಾಯ್ಪುರದಿಂದ ಬೆಂಗಳೂರಿಗೆ ವರ್ಗಾವಣೆಯಾಗಿದ್ದರು. ವಿವೇಕ್ ಬಂಧನದ ಹಿನ್ನೆಲೆಯಲ್ಲಿ ಅವರ ತಂದೆ ಆರ್ ಆರ್ ಬಿ ಮುಖ್ಯಸ್ಥ ಎಸ್ ಎಂ ಶರ್ಮಾ ಅವರನ್ನು ರೈಲ್ವೆ ಇಲಾಖೆ ಅಮಾನತು ಮಾಡಿ ವಿಚಾರಣೆಗೆ ಆದೇಶಿಸಿದೆ.
ಆಯ್ಕೆಯಾದ ಪ್ರತಿ ಅಭ್ಯರ್ಥಿಯೂ ರು.3.5 ಲಕ್ಷ ಕೊಡಬೇಕಾಗಿತ್ತು. ಹಣ ಸಂದಾಯವಾಗುವ ತನಕ ಅಭ್ಯರ್ಥಿಗಳು ತಮ್ಮ ಮೂಲ ಪ್ರಮಾಣ ಪತ್ರಗಳನ್ನು ಜಗನ್ನಾಥಂ ಬಳಿ ಇಡಬೇಕಾಗಿತ್ತು. ಹಣ ಕೊಡಲು ಒಪ್ಪಿಕೊಂಡ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಒಂದು ದಿನ ಮುನ್ನವೇ ಪ್ರಶ್ನೆಪತ್ರಿಕೆಯನ್ನು ಈ ಜಾಲ ತಲುಪಿಸುತ್ತ್ತಿತ್ತು.
ಹಗರಣ ಪ್ರಮುಖ ರೂವಾರಿ ಜಗನ್ನಾಥಂ ಆರ್ ಆರ್ ಬಿ ಅಧಿಕಾರಿಗಳೊಂದಿಗೆ ರು. 1 ಕೋಟಿಗೆ ಒಪ್ಪಂದ ಕುದುರಿಸಿಕೊಂಡಿದ್ದ. ಈಗಾಗಲೆ ರು.55 ಲಕ್ಷಗಳನ್ನು ಅಧಿಕಾರಿಗಳಿಗೆ ಪಾವತಿ ಮಾಡಲಾಗಿದೆ ಎಂದು ಸಿಬಿಐ ತಿಳಿಸಿದೆ. ಜಗನ್ನಾಥಂ ತಂಗಿದ್ದ ಹೋಟೆಲ್ ನಲ್ಲಿ ರು.12 ಲಕ್ಷ ಪತ್ತೆಯಾಗಿದೆ. ಸಿಬಿಐ ದಾಳಿಯ ಹಿನ್ನೆಲೆಯಲ್ಲಿ ಜೂನ್ 27ರಂದು ನಡೆಯಬೇಕಾಗಿದ್ದ ಆರ್ ಆರ್ ಬಿ ಪರೀಕ್ಷೆಯನ್ನು ಮುಂದೂಡುವ ನಿರ್ಧಾರವನ್ನು ರೈಲ್ವೆ ಇಲಾಖೆ ಪ್ರಕಟಿಸಿಲ್ಲ.












Click it and Unblock the Notifications