ಜನಾರ್ದನಸ್ವಾಮಿ ಕಲ್ಪನೆಯ ಕೂಸು ಈ ಮಾಹಿತಿ ಕೇಂದ್ರ
ಆದರೆ ಈ ಸಮಸ್ಯೆಗೆ ಶೀಘ್ರದಲ್ಲಿಯೇ ಉತ್ತರ ದೊರೆಯಲಿದೆ. ಇಡೀ ದೇಶದಲ್ಲೇ ಪ್ರಥಮ ಬಾರಿಗೆ 20 ಲಕ್ಷ ರೂ. ವೆಚ್ಚದಲ್ಲಿ ಇಲ್ಲಿ ಗಣಕೀಕೃತ ಮಾಹಿತಿ ಕೇಂದ್ರ' ತಲೆ ಎತ್ತಲಿದೆ. ಚಿತ್ರದುರ್ಗದ ಸಂಸದ ಜನಾರ್ದನಸ್ವಾಮಿಯವರ ಸಲಹೆ ಸೂಚನೆಯೊಂದಿಗೆ ಮಾಹಿತಿ ಕೇಂದ್ರದ ಕನಸನ್ನು ಚಿತ್ರದುರ್ಗದ ಡಿಸಿ ಎ.ಎ. ಬಿಸ್ವಾಸ್, ಸಿಇಒ ರಂಗೇಗೌಡರು ಸಾಕಾರಗೊಳಿಸುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಆಡಳಿತ ಕಚೇರಿ ಕಟ್ಟಡದ ಪಕ್ಕದಲ್ಲಿ ಮಾಹಿತಿ ಕೇಂದ್ರ' ತಲೆ ಎತ್ತುತ್ತಿದೆ. ಇನ್ನೊಂದು ತಿಂಗಳಲ್ಲಿ ಈ ಕೇಂದ್ರ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಈಗಾಗಲೇ ಕಂಪ್ಯೂಟರ್ ಅಳವಡಿಕೆ ನಡೆಯುತ್ತಿದೆ. ಸಂಸದರು ಅಮೆರಿಕದಲ್ಲಿ ಮುಖ್ಯ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಸನ್ ಮೈಕ್ರೋಸಿಸ್ಟಮ್ ಕಂಪನಿ' ಯೋಜನೆಗಳ ಮಾಹಿತಿಯನ್ನು ಕೇಂದ್ರದಲ್ಲಿ ಗಣಕೀಕರಿಸುವ ಜವಾಬ್ದಾರಿ ಹೊತ್ತುಕೊಂಡಿದೆ.
ಪ್ಲಾನಿಂಗ್ ಕೇಂದ್ರ
ಈ ಪ್ಲಾನಿಂಗ್ ಕೇಂದ್ರದಲ್ಲಿ ಮಹಿಳಾ, ಮಕ್ಕಳ, ವೃದ್ಧರ, ರೈತರ, ಕ್ರೀಡಾ-ಯುವಜನ ಸೇವೆ, ನಿರುದ್ಯೋಗ, ಶಿಕ್ಷಣ ಹೀಗೆ ಪ್ರತಿಯೊಂದಕ್ಕೂ ಪ್ರತ್ಯೇಕ ವಿಭಾಗ. ಕೇಂದ್ರ-ರಾಜ್ಯ ಸರಕಾರಗಳ ನೂರಾರು ಯೋಜನೆಗಳ ಪೂರ್ಣ ಮಾಹಿತಿ, ಕನ್ನಡ -ಇಂಗ್ಲಿಷ್ ಭಾಷೆಯ ಕೈಪಿಡಿ, ಅರ್ಜಿಗಳು ಲಭ್ಯ.
ಯೋಜನೆ ಲಾಭ ಪಡೆಯುವ ಫಲಾನುಭವಿಗೆ ಅರ್ಜಿ ಜತೆಗೆ ಮಾರ್ಗದರ್ಶನ ನೀಡಲು ಇಲ್ಲಿ ಹತ್ತು ಮಂದಿ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಒಟ್ಟಾರೆ ಸಾರ್ವಜನಿಕರ ಪ್ರಶ್ನೆಗೆ ಮಾಹಿತಿ ಕೇಂದ್ರ ಉತ್ತರ ನೀಡಲಿದೆ. ಹಳ್ಳಿ ಜನರಿಗೆ ಕಂಪ್ಯೂಟರ್ ಬಗ್ಗೆ ಪ್ರಾಥಮಿಕ ಜ್ಞಾನ ಕೂಡಾ ಸಿಗಲಿದೆ. ಒಟ್ಟಾರೆ ಜನಾರ್ದನಸ್ವಾಮಿ ಅವರ ತಂತ್ರಜ್ಞಾನ ಜನಸೇವೆಗೆ ನೇರವಾಗಿ ದೊರೆಯಲಿದೆ.
ಜನಾರ್ದನಸ್ವಾಮಿ ಏನು ಹೇಳುತ್ತಾರೆ?
ಜನತೆ ಕೇವಲ ಒಂದೆರಡು ಯೋಜನೆಗಳ ಬಗ್ಗೆ ಪದೇ ಪದೇ ಸಹಾಯ ಕೇಳಿ ನಮ್ಮ ಬಳಿ ಬರುತ್ತಿದ್ದರು. ಉಳಿದ ಯೋಜನೆಗಳ ಬಗ್ಗೆ ಮಾಹಿತಿ, ಜ್ಞಾನ ಇರದ ಕಾರಣ ಅದರ ಬಗ್ಗೆ ಕೇಳುತ್ತಿರಲಿಲ್ಲ. ಆ ಯೋಜನೆಯಲ್ಲಿ ನಮಗೆ ಹೇಗೆ ಸಹಾಯ ಆಗುತ್ತದೆ ಎನ್ನುತ್ತಿದ್ದರು. ಹೀಗಾಗಿ ಕೇಂದ್ರ-ರಾಜ್ಯ ಸರಕಾರಗಳ ಯೋಜನೆ ಬಗ್ಗೆ ಮಾಹಿತಿ ನೀಡಲು ಮಾಹಿತಿ ಕೇಂದ್ರ ಸ್ಥಾಪಿಸಲಾಗುತ್ತಿದೆ.