ಹೊಗೇನಕಲ್ ತೆಪ್ಪದ ಅಂಗಡಿ ಕೆಫೆಟೇರಿಯ

ಹೊಗೇನಕಲ್ ಜಲಪಾತ ವೀಕ್ಷಿಸಲು ಬರುವ ಪ್ರವಾಸಿಗರು ನದಿಯಲ್ಲಿ ತೆಪ್ಪದ ಮೂಲಕ ತೆರಳಿ ಜಲಪಾತದ ತಳಭಾಗದಲ್ಲಿ ಕಾವೇರಿ ನದಿ ಭೋರ್ಗರೆದು ಧುಮ್ಮಿಕ್ಕುವ ರುದ್ರರಮಣೀಯ ದೃಶ್ಯವನ್ನು ನೋಡಲು ಹಾತೊರೆಯುತ್ತಾರೆ.
ತೇಲುವ ಕೆಫೆಟೇರಿಯ:ಹೀಗೆ ತೆಪ್ಪದಲ್ಲಿ ಗಿರಕಿ ಹೊಡೆಯುವ ಪ್ರವಾಸಿಗರಿಗೆ ನದಿಯೊಳಗೆ ತಿನ್ನಲು, ಕುಡಿಯಲು ಬಿಸ್ಲರಿ ನೀರು, ತಂಪು ಪಾನೀಯ, ಬಿಸ್ಕೆಟ್, ಚಿಪ್ಸ್, ಮಕ್ಕಳ ಸಿಹಿತಿಂಡಿಗಳು ಬೇಕಿನಿಸುವುದು ಸಹಜ. ಹಾಗೆಂದು ನಡು ನೀರಿನಲ್ಲಿ ಅದೆಲ್ಲಾ ಸಿಗುತ್ತಾ ಎಂದು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ನೀವು ಎಲ್ಲಿರುತ್ತೀರೋ ಅಲ್ಲಿಗೆ, ನಿಮ್ಮ ಸನಿಹಕ್ಕೆ ಅವುಗಳೆಲ್ಲಾ ಬರುತ್ತವೆ.
ಅದು ನೀವು ಸನ್ನೆ ಮಾಡಿದ ತಕ್ಷಣ. ಅದು ಹೇಗೆಂದರೆ ತೆಪ್ಪದ ಮೂಲಕ ಜಲಪಾತ ಸನಿಹವಿರುವ ಗೋಪಿನಾಥಂ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಯುವಕರು ಅಂಗಡಿಯಲ್ಲಿ ಮಾರಾಟಮಾಡುವಂತಹ, ಪ್ರವಾಸಿಗರಿಗೆ ಅಗತ್ಯವಿರುವಂತಹ ವಸ್ತುಗಳನ್ನು ತೆಪ್ಪದಲ್ಲಿಟ್ಟು ಮಾರಾಟ ಮಾಡುತ್ತಾರೆ. ಆ ಮೂಲಕ ಒಂದಷ್ಟು ಸಂಪಾದಿಸಿ ಹೊಟ್ಟೆಹೊರೆಯುತ್ತಾರೆ.
ಸದಾ ನೀರಿನಲ್ಲಿಯೇ ಅತ್ತಿಂದಿತ್ತ ಅಡ್ಡಾಡುತ್ತಾ ವ್ಯಾಪಾರ ಮಾಡುವುದು ಸುಲಭದ ಕೆಲಸವಲ್ಲ, ಆದರೂ ಈ ಯುವಕರು ಅದನ್ನು ನಿತ್ಯದ ಕಾಯಕವನ್ನಾಗಿ ಮಾಡಿಕೊಂಡಿದ್ದಾರಲ್ಲದೆ, ಮಳೆಗಾಲದಲ್ಲಿಯೂ ತಮ್ಮ ಜೀವವನ್ನು ಲೆಕ್ಕಿಸದೆ ದುಡಿಯುತ್ತಾರೆ.
ಈ ಅಂಗಡಿಗಳಲ್ಲಿ ದೊರಕುವ ವಸ್ತುಗಳಿಗೆ ಮುಖಬೆಲೆಗಿಂತ 2 ರಿಂದ 3 ರು. ಹೆಚ್ಚು ಪಡೆದರೂ ಅದೇನು ಹೆಚ್ಚಲ್ಲ ನಮಗೆ ನಡುನೀರಿನಲ್ಲೂ ತಿಂಡಿತಿನಿಸುಗಳು ಸಿಗುತ್ತವೆ ಎಂಬುವುದೇ ಸಂತೋಷದ ವಿಚಾರ ಎನ್ನುತ್ತಾರೆ ಪ್ರವಾಸಿಗರೊಬ್ಬರು.
ರಜಾ ದಿನಗಳಲ್ಲಿ ಜಲಪಾತ ವೀಕ್ಷಿಸಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ ಈ ಸಂದರ್ಭ ದಿನಕ್ಕೆ 400 ರಿಂದ 500 ರುಗಳ ವ್ಯಾಪಾರವಾಗುತ್ತದೆ ಎಂದು ತೆಪ್ಪದ ನಡೆಸುವ ವ್ಯಾಪಾರಿಯೊಬ್ಬರು ಹೇಳುತ್ತಾರೆ.












Click it and Unblock the Notifications