ನಿತ್ಯಾನಂದನ ಮುಕ್ತಿಗೆ ಭಕ್ತರ ಕಠೋರ ವ್ರತ
ರಾಮನಗರ, ಜೂ. 10 : ಉಪ್ಪು ತಿಂದ ಮೇಲೆ ನೀರು ಕುಡಿಯಲೆಬೇಕು ಎಂಬ ರೀತಿಯಲ್ಲಿ ಮಾಡಿದ್ದ ಪಾಪಕ್ಕೆ ರಾಮನಗರ ಜೈಲಿನಲ್ಲಿ ನಿತ್ಯಾನಂದ ಕಂಬಿಗಳ ಹಿಂದೆ ರೆಸ್ಟ್ ತೆಗೊಳ್ತಾ ಇದ್ದಾನೆ. ಇನ್ನೊಂದೆಡೆ ಬಿಕೋ ಎನ್ನುತ್ತಿರುವ ಬಿಡದಿಯ ಧ್ಯಾನಪೀಠಕ್ಕೆ ರೀಎಂಟ್ರಿ ಕೊಡಲಿ ಎಂದು ನಿತ್ಯಾನಂದನ ಅನುಯಾಯಿಗಳು ಕಳೆದ ಐದು ದಿನಗಳಿಂದ ಆನಂದೇಶ್ವರಸ್ವಾಮಿಯ ಮೊರೆಹೋಗಿದ್ದಾರೆ.
ಮೊನ್ನೆಯೆಲ್ಲ ಪ್ರಾರ್ಥನೆ ಹೋಮ ನಡೆಸಿದ್ದ ನಿತ್ಯಾನಂದನ ಭಕ್ತರು ಇಂದು ಮತ್ತೆ ತಣ್ಣೀರು ಸ್ನಾನ, ಉರುಳುಸೇವೆ, ಮಂಡಲಧ್ಯಾನ, ಭಗವದ್ ಗೀತೆ ಪಠಣ, ಆಲದಮರ ಪ್ರದಕ್ಷಿಣಿ ಮಾಡುತ್ತಾ ನಿತ್ಯಾನಂದನ ಬಿಡುಗಡೆಗೆ ದೇವರ ಪ್ರಾರ್ಥನೆ ಮಾಡುತ್ತಿದ್ದಾರೆ. ಈಗಲೂ ಕೂಡ ಸಾರ್ವಜನಿಕರಿಗೆ ನಿರ್ಬಂಧವಿರುವ ಮಠದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ.
ಚಿಂತೆ ಇಲ್ಲದವನಿಗೆ ಸಂತೇಲೂ ನಿದ್ರೆ ಇಲ್ಲವೆಂಬಂತೆ ಪಲ್ಲಂಗಪ್ರವೀಣ ನಿತ್ಯಾನಂದ, ರಂಜಿತಾ ಲೆನಿನ್ ಕೃಪೆಯಿಂದ ರಾಮನಗರ ಜೈಲಿನಲ್ಲಿ ಬಂಧಿಯಾಗಿದ್ದಾನೆ. ಭಕ್ತಾನಂದನೊಂದಿಗೆ ಕಾಲಕಳೆಯುತ್ತಿರುವ ಸರಳುಗಳ ಹಿಂದೆ ಇರುವ ನಿತ್ಯಾನಂದ ಜೈಲಿನಲ್ಲಿನ ಸಹವರ್ತಿಗಳಿಗೆ ಯೋಗಧ್ಯಾನವನ್ನು ಹೇಳುತ್ತಾ ಕಾಲಕಳೆಯುತ್ತಿದ್ದಾನೆ.
ಗುರುವಿನ ಬಿಡುಗಡೆಗಾಗಿ ಭಕ್ತಾದಿಗಳ ಉರುಳುಸೇವೆ! | |
ಈ ನಡುವೆ ನಿತ್ಯಾನಂದನ ಆಶ್ರಮವಾಸಿಗಳು ಮಾತ್ರ ಧ್ಯಾನಪೀಠದಲ್ಲಿರುವ ಆನಂದೇಶ್ವರಸ್ವಾಮಿ ದೇಗುಲದಲ್ಲಿ ದಿನಕ್ಕೊಂದು ಪೂಜೆ ಮಾಡುತ್ತಾ ಬಿಡುಗಡೆಗಾಗಿ ದೇವರ ಮೊರೆಹೊಗಿದ್ದಾರೆ. ನಿತ್ಯಾನಂದನ ಬಿಡುಗಡೆಯಾಗುವವರೆಗೂ ಧ್ಯಾನಪೀಠದಲ್ಲಿ ದಿನಕ್ಕೊಂದು ರೀತಿಯಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದೆಂದು ಆಶ್ರಮವಾಸಿಯಾಗಳು ಹೇಳುತ್ತಿದ್ದಾರೆ.
ನಿತ್ಯಾನಂದ ಜೈಲುಪಾಲಾಗಿ ಇಂದಿಗೆ ಸರಿಯಾಗಿ 46 ದಿನಗಳು ಕಳೆದಿವೆ ಆದರೂ ನಿತ್ಯಾನಂದನಿಗೆ ಮಾತ್ರ ನ್ಯಾಯಾಲಯ ಬಿಡುಗಡೆಯ ಭಾಗ್ಯ ದೊರಕಿಸಿಕೊಟ್ಟಿಲ್ಲ. ಇದರಿಂದ ಕಂಗೆಟ್ಟಿರುವ ನಿತ್ಯಾನಂದನ ಶಿಷ್ಯವಲಯ ಬೆಳಿಗ್ಗೆ ಎದ್ದು ತಣ್ಣೀರು ಸ್ನಾನ ಮಾಡಿ ಆನಂದೇಶ್ವರಸ್ವಾಮಿ ದೇಗುಲದ ಸುತ್ತ ಉರುಳುಸೇವೆ ಮಾಡುತ್ತಿದ್ದಾರೆ. ತಮ್ಮ ಪರಮಗುರುವಿನ ಛಾಯಾಚಿತ್ರಕ್ಕೆ ಹಾರ ಹಾಕಿ ನಿತ್ಯ ಧ್ಯಾನ, ಭಜನೆಯಲ್ಲಿ ತೊಡಗಿದ್ದಾರೆ.
ಒಟ್ಟಾರೆ ನಿತ್ಯಾನಂದನಲ್ಲಿದೆ ಎಂದು ಹೇಳುವ ಅದೃಶ್ಯ ಶಕ್ತಿ ಅವನ ಸೆರೆಮನೆಯಲ್ಲಿದ್ದಾಗ ಯಾವುದೇ ಪ್ರಯೋಜನಕ್ಕೆ ಬರಲಿಲ್ಲ. ಆದ್ದರಿಂದ ತಮ್ಮ ಗುರುವರ್ಯ ನಿತ್ಯಾನಂದನ ಬಿಡುಗಡೆಗಾಗಿ ಶಿಷ್ಯವರ್ಗ ದಿನಕ್ಕೊಂದು ಪೂಜೆ ಸಲ್ಲಿಸುತ್ತಾ ದೇವರಿಗೆ ಮೊರೆಹೋಗಿದ್ದಾರೆ. ನಿತ್ಯಾನಂದನ ಶಿಷ್ಯರ ಕೂಗು ದೈವನಿಗೆ ಮುಟ್ಟಿ ನಿತ್ಯಾನಂದ ಬಿಡುಗಡೆಯಾಗಲಿದ್ದಾನೆಯೇ ಎಂದು ಕಾದುನೋಡಬೇಕಾಗಿದೆ.