ಬಳ್ಳಾರಿಯಲ್ಲಿ ಹೈನುಗಾರಿಕೆ ಅಭಿವೃದ್ಧಿಗಾಗಿ ರೆಡ್ಡಿ ಸಂಕಲ್ಪ
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಮತ್ತು ಜೀವ ವಿಮಾ ಪದ್ಧತಿ ಜಾರಿಗೆ ತಂದ ಪ್ರಥಮ ರಾಜ್ಯ ಕರ್ನಾಟಕ ಎಂದು ಸೋಮಶೇಖರ ರೆಡ್ಡಿ ಅವರು ಹೇಳಿದರು.
ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರನಾಗಿ ಕಾರ್ಯನಿರ್ವಹಿಸುತ್ತಿರುವಾಗ ಕೆಎಂಎಫ್ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಮಹಾಮಂಡಲಕ್ಕೆ ಹೋಗಿ ಬರುತ್ತಿದ್ದೆ. ಪಾಲಿಕೆಯ ನೌಕರರ ಒತ್ತಾಯವೇ ನನ್ನನ್ನು ಇಂದು ಕೆಎಂಎಫ್ ಅಧ್ಯಕ್ಷನಾಗುವಂತೆ ಮಾಡಿದೆ ಎಂದು ನುಡಿದರು.
ಬಳ್ಳಾರಿ ಜಿಲ್ಲೆಯಲ್ಲಿ ಹೈನುಗಾರಿಕೆಯನ್ನು ಅಭಿವೃದ್ದಿ ಪಡಿಸಲು ಜಿಲ್ಲಾ ಪಂಚಾಯತಿ 7 ಕೋಟಿ 28 ಲಕ್ಷ ರೂ.ಗಳನ್ನು ಮೀಸಲು ಮಾಡಿದೆ. ಇದರಿಂದ ಜಿಲ್ಲೆಯಲ್ಲಿ ಹಾಲು ಉತ್ಪಾದನೆಯನ್ನು ದ್ವಿಗುಣಗೊಳಿಸಲು ಸಾಧ್ಯವಾಗುತ್ತದೆ. ರೈತರಿಗೆ ಶೇಕಡಾ 6 ಬಡ್ಡಿದರದಲ್ಲಿ ಜಾನುವಾರುಗಳ ಖರೀದಿಗಾಗಿ ಸಾಲ ನೀಡಲಾಗುತ್ತದೆ ಎಂದು ರೆಡ್ಡಿ ವಿವರಿಸಿದರು.
ಸಂಸದೆ ಜೆ. ಶಾಂತಾ ಅವರು ಮಾತನಾಡಿ, ರಾಜ್ಯದಲ್ಲಿ ಈವರೆಗೆ ಬಳ್ಳಾರಿ ಜಿಲ್ಲೆಯನ್ನು ಕಡೆಗಣಿಸಲಾಗಿತ್ತು, ಆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ವಿರೋಧ ಪಕ್ಷಗಳು ಸಹಿತ ಬೆರಗಾಗುವಂತೆ ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ. ಸರಕಾರದ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಬೇಕಾಗಿದ್ದ ವಿರೋಧ ಪಕ್ಷಗಳು ವಿನಾಕಾರಣ ವಿರೋಧಿಸುತ್ತಿವೆ ಎಂದು ಅಸಮಧಾನ ವ್ಯಕ್ತಪಡಿಸಿದರು.