ಮುಗಿಲು ಮುಟ್ಟಿದ ನೋವಿನ ಆಕ್ರಂದನ
ಈ ಬಸ್ ದುರಂತದಲ್ಲಿ ಸತ್ತ 30 ಮಂದಿಯಲ್ಲಿ 24 ಮಂದಿ ಸುರಪುರದ ಕೂಲಿ ಕಾರ್ಮಿಕರು , ಈಗಾಗಲೇ 21 ಮಂದಿಯ ಶವವನ್ನು ಗುರುತಿಸಲಾಗಿದ್ದು, ಚಳ್ಳಕೆರೆಯ ಅಸ್ಪತ್ರೆಯಲ್ಲಿ ಶವಗಳನ್ನು ಇಡಲಾಗಿದೆ. ಡಿಎನ್ ಎ ತಂತ್ರಜ್ಞಾನ ಬಳಸಿ ಉಳಿದ ಶವಗಳ ಗುರುತು ಪತ್ತೆ ಕಾರ್ಯ ಮಾಡಲಾಗುತ್ತದೆ. ಸುರುಪುರದಿಂದ ಮೃತರ ಕುಟುಂಬದವರು ಚಳ್ಳಕೆರೆಗೆ ದಾವಿಸಿಬಂದಿದ್ದಾರೆ.
ಬದುಕುಳಿದವರು ಹೇಳಿದ ಕಥೆ ವ್ಯಥೆ: ಮುಂಜಾನೆ ವೇಳೆ ವಾಹನಗಳು ಕಮ್ಮಿಯಿದ್ದ ಕಾರಣ, ದುರಂತಕ್ಕೀಡಾದ ಬಸ್ ಸುಮಾರು 80 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು, ಮುಂದೆ ಬರುತ್ತಿದ್ದ ಲಾರಿಗೆ ಗುದ್ದುವುದನ್ನು ತಪ್ಪಿಸಲು ಹೋಗಿ ರಸ್ತೆ ವಿಭಜಕಕ್ಕೆ ಗುದ್ದಿ ಪಲ್ಟಿ ಹೊಡೆದು ಪಕ್ಕದ ನಾಲ್ಕೈದು ಅಡಿ ಹಳ್ಳಕ್ಕೆ ಬಿತ್ತು ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ಹೇಳುತ್ತಾರೆ.
ಬಸ್ ನ ಬಾಗಿಲು ನೆಲಮುಖವಾಗಿ ಬಿದ್ದಿತ್ತು. ಡೀಸೆಲ್ ಟ್ಯಾಂಕ್ ಗೆ ಬೆಂಕಿ ತಗುಲಿತು. ಆದರೆ, ಬಾಗಿಲು ತೆಗೆದು ಹೊರಬರಲಾಗದೆ 30 ಮಂದಿ ಸಜೀವ ದಹನವಾದರು. ಬಹುತೇಕ ಪ್ರಯಾಣಿಕರು ಮುಂಜಾನೆಯ ಸುಖನಿದ್ರೆಯಲ್ಲಿದ್ದರು.
ಬಸ್ ಗೆ ಬೆಂಕಿ ತಗುಲಿದ ತಕ್ಷಣ, ಎಚ್ಚರಗೊಂಡು ಕೈಲಿದ್ದ ಮಗುವನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಕಿಟಕಿ ಗಾಜು ಹೊಡೆದು ಹೊರಬಿದ್ದೆ .ಆದರೆ, ನನ್ನ ಹೆಂಡತಿಯನ್ನು ಬದುಕಿಸಲಾಗಲಿಲ್ಲ. ಈಗ ನನ್ನ ಮಗುವಿಗೆ ಯಾರು ದಿಕ್ಕು ಎಂದು ಹೆಂಡತಿ ಶವವನ್ನು ಗುರುತಿಸಲು ಹೆಣಗಾಡುತ್ತಿದ್ದ ವ್ಯಕ್ತಿ ನೋವಿನಿಂದ ಹೇಳಿದರು.