ಬಸ್ ನುಗ್ಗಿ ಹಂಪಿ ಐತಿಹಾಸಕ ಸ್ಮಾರಕಕ್ಕೆ ಧಕ್ಕೆ
ಮೇ 23ರ ಭಾನುವಾರ ಸಂಜೆ ಪ್ರವಾಸಿಗರನ್ನು ಹಂಪೆಗೆ ಕರೆತಂದಿದ್ದ ಮೈಸೂರಿನ ಖಾಸಗಿ ಬಸ್ ಸ್ಥಳೀಯರ ವಿರೋಧದ ನಡುವೆ ಕೆಳಭಾಗದಲ್ಲಿ ಇರುವ ಐತಿಹಾಸಿಕ ಕೋಟೆ ಬಾಗಿಲಿನ ಒಳಗಡೆ ಪ್ರವೇಶಿಯೇಬಿಟ್ಟಿತು. ಈ ಸಂದರ್ಭದಲ್ಲಿ ಕೋಟೆಯ ಮೇಲ್ಛಾವಣಿಗೆ ಆಸರೆ ಅಗಿದ್ದ ಕಲ್ಲಿನ ಕಂಭ ಕಿತ್ತುಕೊಂಡು ಬಸ್ಸಿನ ಸಮೇತ ಬಂದಿತು.
ಪ್ರವಾಸಿಗರನ್ನು ಹಂಪೆಯತ್ತ ಕರೆತರುವ ನೆಪದಲ್ಲಿ, ಪ್ರವಾಸೋದ್ಯಮವನ್ನು ಬೆಳೆಸುವ ನೆಪದಲ್ಲಿ ಟ್ಯೂರಿಸ್ಟ್ ಏಜೆಂಟರು, ಬಸ್ಗಳ ಚಾಲಕರು - ಮಾಲೀಕರು ಒತ್ತಾಯದಿಂದಲೇ ಈ ಕೋಟೆ ಬಾಗಿಲನ್ನು ಪ್ರವೇಶಿಸಿ ಸ್ಥಳೀಯ ಸ್ಮಾರಕಗಳನ್ನು ಹಾಳು ಮಾಡುತ್ತಿದ್ದಾರೆ. ಈ ರೀತಿಯ ಅವಘಡಗಳು ಈ ಕೋಟೆ ಬಾಗಿಲಲ್ಲಿ ನಿರಂತರವಾಗಿ ನಡೆಯುತ್ತಲೇ ಇವೆ. ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರ ತವರು ಜಿಲ್ಲೆಯಲ್ಲೇ ಸ್ಮಾರಕಗಳು ಹಾಳಾಗುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.
ಇಲ್ಲಿಯ ಸ್ಮಾರಕ ಸಂರಕ್ಷರು, ಸಾರ್ವಜನಿಕರು ಹಾಗೂ ಹಂಪೆ ಉಳಿಸಿ ಆಂದೋಲನದ ಸಮಿತಿ ಸದಸ್ಯರು ಈ ಸಮಸ್ಯೆಯ ಪರಿಹಾರಕ್ಕೆ ಗಮನ ನೀಡುತ್ತಿಲ್ಲ. ಅಲ್ಲದೇ, ನಡೆಯುವ ಅವಘಡಗಳಲ್ಲಿ ಕೋಟೆ ಬಾಗಿಲು ಕ್ರಮೇಣ ಹಾಳಾಗುತ್ತಿದೆ.
ಈ ರೀತಿಯ ಅನಾಹುತಗಳು ನಡೆದಾಗ ಭಾರತೀಯ ಪುರಾತತ್ವ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಟ್ಟಡದ ಪುನರ್ ನಿರ್ಮಾಣ ಮಾಡುವ ನೆಪದಲ್ಲಿ ಲಕ್ಷಾಂತರ ರು.ಗಳ ಬಿಲ್ಗಳನ್ನು ಪಡೆದು ಹಣ ಲೂಟಿ ಮಾಡುವ ದಂಧೆ ನಡೆಸುತ್ತಿದ್ದಾರೆ ಎಂದು ಅನೇಕರು ಆರೋಪಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆ ಸಚಿವರೇ ಜಿಲ್ಲಾ ಉಸ್ತುವಾರಿ ವಹಿಸಿದ್ದು, ಇದೇ ಜಿಲ್ಲೆಯಲ್ಲಿ ಇರುವ ಯುನೆಸ್ಕೋದ ಅಳಿವಿನ ಅಂಚಿನಲ್ಲಿ ಇರುವ ಐತಿಹಾಸಿಕ ಸ್ಮಾರಕಗಳ ಪಟ್ಟಿಯಲ್ಲಿ ದಾಖಲಾಗಿರುವ ಹಂಪೆಯಲ್ಲಿ ಪರಿಸ್ಥಿತಿ ಹೀಗಾದಲ್ಲಿ ರಾಜ್ಯದ ಇತರೆ ಸ್ಮಾರಕಗಳ ಸಂರಕ್ಷಣೆ ಬಗ್ಗೆ ನಮಗೆ ಸಾಕಷ್ಟು ಅನುಮಾನಗಳೇ ಆಗುತ್ತಿವೆ ಎಂದು ಹಂಪೆಯ ಬಗ್ಗೆ ಕಳಕಳಿಯುಳ್ಳ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
2008ರ ನವೆಂಬರ್ನಲ್ಲಿ ಒಂದು ಬಸ್ ಇದೇ ರೀತಿ ಈ ಬಾಗಿಲು ಮೂಲಕ ಸಂಚರಿಸಲು ಹೋಗಿ ಮೇಲಿನ ಕಲ್ಲುಕಂಭ ಕಿತ್ತು ಬಂದಿತ್ತು. ಹಂಪೆ ಪ್ರವಾಸಕ್ಕೆ ಬಂದಿದ್ದ ಆಂಧ್ರದ ಖಾಸಗಿ ಬಸ್ ಸಹ ಇದೇ ರೀತಿ ನುಗ್ಗಿ ಕಲ್ಲುಕಂಭವನ್ನು ಕಿತ್ತಿ ಹಾಕಿತ್ತು. ಎರಡು ಬಾರಿ ಸಂರಕ್ಷಣೆ ಕಾರ್ಯ ಕೈಗೊಂಡ ಭಾರತೀಯ ಪುರಾತತ್ವ ಇಲಾಖೆಯು ಈಗ ಮೂರನೇ ಬಾರಿಗೂ 'ಸಂರಕ್ಷಣೆ' ಕಾರ್ಯಕ್ಕೆ ಮುಂದಾಗಿದೆ!