ರಾಜಭವನದಲ್ಲಿ ಗಣಿ ಬಿಸಿನೆಸ್ ಮಾಡುತ್ತಿಲ್ಲ
ಬೆಂಗಳೂರು, ಮೇ. 16 : ರಾಜಭವನದಲ್ಲಿ ಕುಳಿತುಕೊಂಡು ನಾನು ಗಣಿ ಬಿಸಿನೆಸ್ ಮಾಡುತ್ತಿಲ್ಲ. ಸಂವಿಧಾನ ನನಗೂ ಚೆನ್ನಾಗಿ ಗೊತ್ತುಂಟು. ರಾಜ್ಯಪಾಲ ಎಂಬ ಮಾತ್ರಕ್ಕೆ ಇತಿಮಿತಿ ಮೀರಿ ವರ್ತಿಸುತ್ತಿಲ್ಲ ಎಂದು ಎಚ್ ಆರ್ ಭಾರದ್ವಾಜ್ ಅವರು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿಗೆ ತಿರುಗೇಟು ನೀಡಿದ್ದಾರೆ.
ರಾಜ್ಯಪಾಲರು ತಮಗೆ ನೋಟಿಸ್ ನೀಡಿರುವುದನ್ನು ಕಾನೂನುಬಾಹಿರ ಎಂದು ಟೀಕಿಸಿರುವ ರೆಡ್ಡಿ ವಿರುದ್ಧ ರಾಜ್ಯಪಾಲರು ತಿರುಗಿ ಬಿದ್ದಿದ್ದಾರೆ. ನಗರದ ನಾಗರಭಾವಿ ಕಾನೂನು ಕಾಲೇಜಿನಲ್ಲಿ ನಡೆದ ಒಂದು ವಿಚಾರ ಸಂಕಿರಣದಲ್ಲಿ ಭಾಗವಹಿಸಿದನಂತರ ಭಾರದ್ವಾಜ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಸಂವಿಧಾನದ ಬಗ್ಗೆ ನಾನು ಯಾರಿಂದಲೂ ಪಾಠ ಕಲಿಯಬೇಕಿಲ್ಲ. ಕೇಂದ್ರದಲ್ಲಿ ಕಾನೂನು ಸಚಿವನಾಗಿದ್ದ ನನಗೆ ಲಾಭದಾಯಕ ಹುದ್ದೆಗಳು ಯಾವುವು ಎಂದು ಕಲಿಸಿ ಕೊಡುವ ಅಗತ್ಯವಿಲ್ಲ. ಆದರೆ, ಇಲ್ಲಿ ವ್ಯಕ್ತಿಗಳು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಜನಾರ್ಧನ ರೆಡ್ಡಿಯವರತ್ತ ಬೆರಳು ತೋರಿಸಿ ಚುಚ್ಚಿದರು.
ಹಾಗೆಂದು ರೆಡ್ಡಿ ವಿರುದ್ಧ ನಾನು ಹಗುರವಾಗಿ ಮಾತನಾಡುವುದಿಲ್ಲ. ಏಕೆಂದರೆ, ಅವರೆಲ್ಲ ಮುಖ್ಯಮಂತ್ರಿಯಿಂದ ನೇಮಕಗೊಂಡ ಸಚಿವರು, ಸಚಿವರಾದ ಅವರಿಗೆ ಹಲವು ಬಿಸಿನೆಸ್ ಗಳಿರಬಹುದು. ರಾಜಭವನದಲ್ಲಿ ಕುಳಿತು ನಾನು ಅವರಂತೆ ಬಿಸಿನೆಸ್ ಮಾಡುತ್ತಿಲ್ಲ. ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದರೆ ಕರ್ನಾಟಕ ಸರಕಾರ ನನ್ನ ವಿರುದ್ಧ ಸಂಘರ್ಷಕ್ಕೆ ಇಳಿದಿದೆ ಎಂದು ಭಾಸವಾಗುತ್ತದೆ ಎಂದು ಭಾರದ್ವಾಜ್ ಅಸಮಾಧಾನ ವ್ಯಕ್ತಪಡಿಸಿದರು.