ರಾಮನಗರದಲ್ಲಿ ನಿತ್ಯಾನಂದನ ಜಾಮೀನು ಅರ್ಜಿ ವಜಾ
ಈ ಹಿನ್ನೆಲೆಯಲ್ಲಿ ನಿತ್ಯಾನಂದನ ಪರವಕೀಲರಾದ ಚಂದ್ರಮೌಳಿ ಮಾರ್ಚ್ 24ರಂದು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 9ರಂದು ಸರ್ಕಾರದ ಪರ ವಕೀಲ ಶ್ರೀರಾಮರೆಡ್ಡಿಯವರು ಸ್ತ್ರೀಲೋಲ ನಿತ್ಯಾನಂದನಿಗೆ ಜಾಮೀನು ನೀಡದಂತೆ ತಕರಾರು ಅರ್ಜಿ ಸಲ್ಲಿಸಿದ್ದರು. 5 ಬಾರಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿತ್ತು. ನಂತರ ಬುಧವಾರ ನಡೆದ ವಿಚಾರಣೆ ಸಂದರ್ಭದಲ್ಲಿ ಜಿಲ್ಲಾ ಸತ್ರ ನ್ಯಾಯಾಧೀಶ ಸಿ.ಜಿ.ಹುನಗುಂದರವರು ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಈ ನಡುವೆ ಸಿಐಡಿ ಅಧಿಕಾರಿಗಳು ನಿತ್ಯಾನಂದನ ಬಿಡದಿಯ ಆಶ್ರಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹಲವಾರು ಮಹತ್ವದ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆನ್ನಲಾಗಿದೆ. ನಟಿ ರಂಜಿತಾ ಜೊತೆ ನಿತ್ಯಾನಂದ ನಡೆಸಿದ ರಾಸಲೀಲೆ ಪ್ರಕರಣ ಬಹಿರಂಗವಾದ ದಿನದಂದು ಇದ್ದಕ್ಕಿದ್ದಂತೆ ಬಿಡದಿ ಆಶ್ರಮದ ರಹಸ್ಯ ಕುಟೀರಗಳಿಗೆ ಬೆಂಕಿ ಬಿದ್ದುದರ ಹಿಂದೆ ಹಲವು ಅನುಮಾನಗಳು ಮೂಡಿವೆ. ಕೆಲವು ಮೂಲದ ಪ್ರಕಾರ ಖೋಟಾ ನೋಟುಗಳನ್ನು ಸಂಗ್ರಹಿಸಿಟ್ಟಿದ್ದರಿಂದ ಮಠದ ಕೆಲವು ಚೇಲಾಗಳೇ ಬೆಂಕಿ ಇಟ್ಟಿದ್ದಾರೆಂದು ಹೇಳಲಾಗುತ್ತಿದೆ. ಒಟ್ಟಾರೆ ಪೊಲೀಸರ ಪ್ರಾಮಾಣಿಕ ತನಿಖೆಯಿಂದ ನಿತ್ಯಾನಂದನ ಮತ್ತೊಂದು ವ್ಯಾಘ್ರಮುಖದ ದರ್ಶನವಾಗಬೇಕಾಗಿದೆ.
ಮೊದಲಿಗೆ ನಿತ್ಯಾನಂದನ ಪ್ರಕರಣವನ್ನು ಸ್ಥಳೀಯ ಡಿವೈಎಸ್ಪಿ ದೇವರಾಜ್ ತನಿಖೆ ನಡೆಸುತ್ತಿದ್ದರು. ನಂತರ ಸಿ.ಐ.ಡಿ ಎಸ್.ಪಿ ಯೋಗಪ್ಪನವರ ನೇತೃತ್ವದಲ್ಲಿ ನಿತ್ಯಾನಂದನ ಬೇಟೆ ಕಾರ್ಯ ನಡೆಯುತ್ತಿತ್ತು. ಹಿಮಾಚಲ ಪ್ರದೇಶದಲ್ಲಿ ಬಂಧಿಯಾಗಿರುವ ನಿತ್ಯಾನಂದನನ್ನು ಗುರುವಾರ ಬೆಂಗಳೂರಿಗೆ ಕರೆತರಲಾಗುತ್ತಿದೆ.