ಯಡಿಯೂರಪ್ಪ, ಕುಮಾರಸ್ವಾಮಿ ಮಾತಿನ ಯುದ್ಧ

ಬಳ್ಳಾರಿಯಲ್ಲಿ ಪ್ರತಿಪಕ್ಷಗಳನ್ನು ಕುಟುಕಿದ ಯಡಿಯೂರಪ್ಪ, ಬಿಜೆಪಿ ಏಕಾಂಗಿಯಾಗಿಯೇ ಚುನಾವಣೆಗಿಳಿದಿದೆ, ಏಕಾಂಗಿಯಾಗಿಯೇ ಪ್ರತಿಪಕ್ಷಗಳನ್ನು ಎದುರಿಸಿದೆ ಮತ್ತು ಬಿಬಿಎಂಪಿ ಚುನಾವಣೆಯಲ್ಲಿ ಬಯಭೇರಿ ಬಾರಿಸಲಿದೆ. ಬಿಜೆಪಿ ಅಭ್ಯರ್ಥಿಯೇ ಬೆಂಗಳೂರು ಮೇಯರ್ ಆಗಲಿದ್ದಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಏಪ್ರಿಲ್ 5ರಂದು ದೊರೆಯಲಿರುವ ಬಿಬಿಎಂಪಿ ಚುನಾವಣೆ ಫಲಿತಾಂಶದಲ್ಲಿ ಇದು ತಿಳಿಯಲಿದೆ ಎಂದು ಅವರು ಹೇಳಿದರು.
ಗ್ರಾಮಪಂಚಾಯತಿ ಚುನಾವಣೆಗಳನ್ನು ಮುಂದೂಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾಡಿರುವ ಆರೋಪವನ್ನು ತಳ್ಳಿಹಾಕಿದ ಮುಖ್ಯಮಂತ್ರಿ ಗ್ರಾಮ ಪಂಚಾಯತಿ ಚುನಾವಣೆಯನ್ನು ನಡೆಸಲು ಸರಕಾರ ಸಮರ್ಥವಿದೆ ಮತ್ತು ಮುಂದೂಡಲು ಯತ್ನಿಸುತ್ತಿಲ್ಲ ಎಂದು ಪ್ರತ್ಯುತ್ತರ ನೀಡಿದರು.
ಕುಮಾರಸ್ವಾಮಿ ತಿರುಗೇಟು : ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರಕಾರ. ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಏನೂ ಗೊತ್ತಿಲ್ಲದವರಂತೆ ಮುಖ್ಯಮಂತ್ರಿ ಕಣ್ಣುಮುಚ್ಚಿ ಕುಳಿತಿದ್ದಾರೆ. ಕಳೆದ ನವೆಂಬರ್ ನಲ್ಲಿಯೇ ಸಿಬಿಐಗೆ ವಹಿಸುವಂತೆ ಪತ್ರ ಬರೆಯಲಾಗಿತ್ತಾದರೂ, ಅದನ್ನು ಬಿಜೆಪಿ ಕಡೆಗಣಿಸಿದೆ. ಧೈರ್ಯವಿದ್ದರೆ ಅಕ್ರಮ ಗಣಿಗಾರಿ ಪ್ರಕರಣವನ್ನು ಸರಕಾರ ಸಿಬಿಐಗೆ ವಹಿಸಲಿ ಎಂದು ಸವಾಲು ಎಸೆದರು.
ಮುಖ್ಯಮಂತ್ರಿ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ ಕುಮಾರಸ್ವಾಮಿ, ಚುನಾವಣಾ ಆಯುಕ್ತ ಬಿಜೆಪಿ ಸರಕಾರದ ಏಜೆಂಟ್ ನಂತೆ ವರ್ತಿಸುತ್ತಿದ್ದಾರೆ. ಚುನಾವಣಾಯುಕ್ತಗೆ ಕ್ಲರ್ಕ್ ಆಗಿ ಕೂಡ ಕೆಲಸ ಮಾಡುವ ಯೋಗ್ಯತೆಯಿಲ್ಲ ಎಂದರು.
ರಾಜ್ಯದ ಆಡಳಿತ ವೈಖರಿಯನ್ನು ಟೀಕಿಸಿದ ಕುಮಾರಸ್ವಾಮಿ, ಇಲ್ಲಿನ ಆಡಳಿತ ಬಿಹಾರಕ್ಕಿಂತ ಕಡೆಯಾಗಿದೆ ಎಂದು ಕಿಡಿಕಾರಿದರು. ಹಿಂದೆ ಬಿಹಾರ ಗೂಂಡಾ ರಾಜ್ಯವಾಗಿತ್ತು. ಈಗ ಅಭಿವದ್ಧಿಯತ್ತ ಸಾಗಿದೆ. ಆದರೆ, ರಾಜ್ಯವನ್ನು ಬಿಜೆಪಿ ಸರಕಾರ ಬಿಹಾರವನ್ನಾಗಿ ಮಾಡುತ್ತಿದೆ ಎಂದು ಲೇವಡಿ ಮಾಡಿದರು.












Click it and Unblock the Notifications