ಚುನಾವಣಾ ಕಣ ಆಗೈತೆ ನೋಡು ಗೊಂದಲಗಳ ಗೂಡು
160ನೇ ವಾರ್ಡ್ ನಲ್ಲಿ ಮತದಾನ ನಡೆಯುತ್ತಿದ್ದಾಗ ಶ್ರೀನಿವಾಸ್ ಮತದಾರರಿಗೆ ಹಣ ಹಂಚಿ ಮತ ನೀಡಲು ಆಮಿಷ ಒಡ್ಡುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ. ಎರಡೂ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದ ಪೊಲೀಸರು ಎರಡೂ ಪಕ್ಷಗಳ ಕಾರ್ಯಕರ್ತರನ್ನು ಚದುರಿಸಲು ಲಘು ಲಾಠಿ ಪ್ರಹಾರ ಮಾಡಿದ್ದಾರೆ.
ಶಾಸಕರು ಜನರಿಗೆ ಹಣ ಹಂಚುತ್ತಿದ್ದುದು ಕಣ್ಣಿಗೆ ಕಂಡರೂ ಪೊಲೀಸರು ಮತ್ತು ಚುನಾವಣಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜೆಡಿಎಸ್ ಆರೋಪಿಸಿದೆ.
ಈಜಿಪುರದಲ್ಲಿ ಮಾರಾಮಾರಿ : ಈಡಿಪುರದ 140 ವಾರ್ಡ್ ನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಸರೋಜಾ ಅವರು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಈ ಸಂಬಂಧ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನೀತು ದೊಡ್ಡಗಣೇಶ ಆಕ್ರೋಶ : ಎಚ್ಎಮ್ ಟಿ ವಾರ್ಡ್ ನಲ್ಲಿ ಚುನಾವಣಾ ಅಖಾಡದಲ್ಲಿರುವ ಕರ್ನಾಟಕದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಅವರ ಪತ್ನಿ ನೀತು ದೊಡ್ಡ ಗಣೇಶ್ ಅವರು ಇತರ ಪಕ್ಷಗಳಿಂದ ಲಕ್ಷಕ್ಕೂ ಹೆಚ್ಚಿನ ದುಡ್ಡನ್ನು ಹಂಚಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅವರು ಜೆಡಿಎಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ.
ಗಂಡ ದೊಡ್ಡ ಗಣೇಶ್ ಮತ್ತು ಪಕ್ಷದ ಕಾರ್ಯಕರ್ತರ ಸಮೇತ ರಸ್ತೆಯಲ್ಲಿ ಧರಣಿ ನಡೆಸಿ ಚುನಾವಣೆ ಕಣದಿಂದ ಹೊರಬರುವ ಬೆದರಿಕೆ ಒಡ್ಡಿದ್ದರು. ಆದರೆ, ಪೊಲೀಸರು ಮನವೊಲಿಸಿದ್ದರಿಂದ ಧರಣಿಯನ್ನು ಹಿಂದಕ್ಕೆ ಪಡೆದರು.
ಹೃದಯಾಘಾತದಿಂದ ಸಾವು : ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ 102 ವಾರ್ಡ್ ವೃಷಭಾವತಿ ನಗರದ ಮತಗಟ್ಟೆಯೊಂದರಲ್ಲಿ ಕೆಂಪಯ್ಯ (65) ಎಂಬುವವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಹೆಸರು ಮತಪಟ್ಟಿಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತಪಟ್ಟಿಯಲ್ಲಿ ಇದ್ದ ಹೆಸರು ಈ ಚುನಾವಣೆಯಲ್ಲಿ ಇಲ್ಲ ಎಂದು ಕೆಂಪಯ್ಯ ಅವರ ಮಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.