ವಿಪತ್ತು ನಿರ್ವಹಣೆಗೆ ಪ್ರತ್ಯೇಕ ನಿಧಿ ಅವಶ್ಯ
ಬೆಂಗಳೂರಿನಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಸೇಫ್ ವರ್ಲ್ಡ್ 2010 ವಿಪತ್ತು ನಿರ್ವಹಣೆ ಕುರಿತು ರಾಷ್ಟ್ರಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಪತ್ತು ನಿರ್ವಹಣೆಯಲ್ಲಿ ಮುಖ್ಯಪಾತ್ರ ವಹಿಸುವ ಅಗ್ನಿಶಾಮಕ ದಳ ಮತ್ತಿತರ ಇಲಾಖೆಗಳು ಸುಸಜ್ಜಿತ ಉಪಕರಣ, ಸಲಕರಣೆ, ಮೂಲಸೌಲಭ್ಯಗಳನ್ನು ಹೊಂದಿರುವುದು ಅತಿ ಅಗತ್ಯ. ಇದಕ್ಕಾಗಿ ಕೇಂದ್ರ ಆರ್ಥಿಕ ನೆರವು ನೀಡುವಂತೆ ಸಲಹೆ ಮಾಡಿದರು.
ನಗರದಲ್ಲಿ ಇತ್ತೀಚೆಗೆ ಸಂಭವಿಸಿದ ಕಾರ್ಲ್ಟನ್ ದುರಂತವನ್ನು ಉಲ್ಲೇಖಿಸಿದ ಅವರು ನಗರ ಪ್ರದೇಶದಲ್ಲಿ ಎತ್ತರದ ಕಟ್ಟಡಗಳಲ್ಲಿ ಕಟ್ಟಡನಿರ್ಮಾಣದ ಎಲ್ಲ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಪರೀಕ್ಷಿಸುವುದು ಅತಿ ಅಗತ್ಯ. ಇದಕ್ಕಾಗಿ ಕಟ್ಟಡದ ಮಾಲಕರು ಅಥವಾ ನಿರ್ವಹಣೆ ಮಾಡುತ್ತಿರುವವರು ಪ್ರತಿವರ್ಷ ಈ ನಿಯಮಗಳ ಪಾಲನೆ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ಮಾಡಬಹುದು ಅಥವಾ ಈ ಕಟ್ಟಡಗಳ ಸುರಕ್ಷತಾ ಕ್ರಮಗಳ ಬಗ್ಗೆ ಆಗಾಗ್ಗೆ ತನಿಖೆ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಜೆ.ಕೆ.ಸಿನ್ಹಾ, ಸೂಕ್ತ ಮುಂಜಾಗ್ರತಾ ಕ್ರಮಗಳಿಂದ ವಿಪತ್ತಿನ ಸಂದರ್ಭದಲ್ಲಿ ಹೆಚ್ಚಿನ ಹಾನಿ ಸಂಭವಿಸುವುದನ್ನು ತಡೆಗಟ್ಟಬಹುದು ಎಂಬುದನ್ನು ಜಪಾನ್ ದೇಶದ ಉದಾಹರಣೆಯೊಂದಿಗೆ ವಿವರಿಸಿದರು.
ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಗೃಹ ರಕ್ಷಕ ದಳ ಮತ್ತು ಪೌರರಕ್ಷಣೆಯ ಡಿಜಿಪಿ ಜೀಜಾ ಮಾಧವನ್ ಹರಿಸಿಂಗ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಪತ್ತು ನಿರ್ವಹಣೆಯ ಕುರಿತು ಜನಸಾಮಾನ್ಯರಿಗೂ ಜಾಗೃತಿ ಮೂಡಿಸುವುದು ಅತಿ ಅಗತ್ಯ ಎಂದರು. ಅಗ್ನಿಶಾಮಕ ಸೇವೆಗಳ ಐಜಿಪಿ ಪಿ.ಎಸ್. ಸಂಧು ಸ್ವಾಗತಿಸಿದರು. ನ್ಯಾಷನಲ್ ರಿಸೋರ್ಸ್ ಸೆಂಟರ್ನ ಸುಭಾಸ್ಕರ ರೆಡ್ಡಿ ವಂದಿಸಿದರು.