ಚರ್ಚ್, ದರ್ಗಾದ ಮೇಲೆ ದುಷ್ಕರ್ಮಿಗಳ ದಾಳಿ

ಕಳೆದ ಸೆಪ್ಟಂಬರ್ 14 ರಂದು ಕೋಟೇಶ್ವರ್ ಬಳಿ ಇರುವ ಚರ್ಚ್ ಮೇಲೆ ದಾಳಿ ನಡೆದಿತ್ತು. ಶನಿವಾರ ರಾತ್ರಿ ಸಹ ಇದೇ ಚರ್ಚೆ ಮೇಲೆ ದಾಳಿ ನಡೆದಿದ್ದು, ಚರ್ಚ್ ಮುಂಭಾಗದಲ್ಲಿರುವ ಬಾಲ ಏಸುವಿನ ಮೂರ್ತಿ ಭಗ್ನಗೊಂಡಿದೆ. ದುಷ್ಕರ್ಮಿಗಳು ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಆದರೆ, ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ದಾಳಿಯ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಲ್ಲಿ ಪೋಲೀಸರು ವಿಫಲರಾಗಿದ್ದಾರೆ ಎಂದು ಸ್ಥಳೀಯರ ಆರೋಪವಾಗಿದೆ.
ಇದೀಗ ಮತ್ತೆ ಅದೇ ಚರ್ಚ್ ಮೇಲೆ ದಾಳಿ ನಡೆದಿದೆ. ದುಷ್ಕರ್ಮಿಗಳು ಕೃತ್ಯ ಎಸಗಿ ಮತ್ತೆ ಪರಾರಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಕುಂದಾಪುರ ಪೋಲೀಸರು ಚರ್ಚ್ ಗೆ ಭಾರಿ ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ.
ಚರ್ಚ್ ದಾಳಿಯ ಬೆನ್ನಲ್ಲೇ ಗುಳೇದಗುಡ್ಡದ ಬಳಿ ಇರುವ ಬೆಟ್ಟದ ಮೇಲಿರುವ ಮೆಹಬೂಬ ಸುಭಾನಿ ದರ್ಗಾದ ಮೇಲೆ ದಾಳಿ ನಡೆದಿದೆ. ಶನಿವಾರವೇ ಈ ದಾಳಿ ನಡೆದಿದೆ. ಆದರೆ, ಇಂದು ಮುಸ್ಲಿಂ ಬಾಂಧವರು ಪ್ರಾರ್ಥನೆಗೆ ತೆರಳಿದಾಗ ದಾಳಿ ನಡೆದಿರುವ ಸಂಗತಿ ಬೆಳಕಿಗೆ ಬಂದಿದೆ. ದಾಳಿ ನಡೆದ ಸ್ಥಳದಲ್ಲಿ ಕೆಲ ಗುರುತುಗಳು ಪತ್ತೆಯಾಗಿದ್ದು, ದಾಳಿಕೋರರನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications