ಸಿಎಂ ಅಶೋಕ್ ಚವಾಣ್ ಅಲ್ಲ ಅಶೋಕ್ ಖಾನ್!
ಅಮೆರಿಕ ಪ್ರವಾಸದಲ್ಲಿರುವ ಶಾರೂಕ್ ಖಾನ್ ವಿವಾದ ಅಂತ್ಯಕ್ಕೆ ಮುಂದಾಗಿದ್ದು, ಪ್ರವಾಸದಿಂದ ವಾಪಾಸ್ಸಾದ ನಂತರ ಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಅವರನ್ನು ಭೇಟಿ ಮಾತಿಕತೆ ನಡೆಸುವುದಾಗಿ ಹೇಳಿದ್ದರು. ಶಾರೂಕ್ ಭೇಟಿಯನ್ನು ತಡೆದಿದ್ದಲ್ಲದೇ, ಶಿವಸೈನಿಕರ ಪುಂಡಾಟಿಕೆಯನ್ನು ಹತ್ತಿಕ್ಕುವುದಾಗಿ ಸರಕಾರ ಹೇಳಿರುವುದು ಠಾಕ್ರೆ ಕೋಪಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ವಿರುದ್ಧ ವಾಕ್ಸಮರ ಆರಂಭಿಸಿರುವ ಠಾಕ್ರೆ, ಅಶೋಕ್ ಚವಾಣ್ ಅವರು ತಮ್ಮ ಹೆಸರನ್ನು ಅಶೋಕ್ ಖಾನ್ ಎಂದು ಬದಲಾಯಿಸಿಕೊಳ್ಳುವುದು ಒಳಿತು ಎಂದು ವ್ಯಂಗ್ಯವಾಡಿದ್ದಾರೆ.
ಪಕ್ಷದ ಮುಖವಾಣಿ ಸಾಮ್ನಾದ ಮುಖಪುಟದಲ್ಲಿ ಮೈನೇಮ್ ಈಸ್ ಅಶೋಕ್ ಖಾನ್ ಎಂಬ ಲೇಖನವನ್ನು ಪ್ರಕಟಿಸಿದ್ದಾರೆ. ಶಾರೂಕ್ ಪರ ಮಾತನಾಡಿರುವ ಚವಾಣ್ ಅವರನ್ನು ಯದ್ವಾತದ್ವಾ ತರಾಟೆಗೆ ತೆಗೆದುಕೊಂಡಿರುವ ಠಾಕ್ರೆ, ಪರಿಸ್ಥಿತಿ ಹೀಗೆ ಮುಂದುವರಿದರೆ ಭಾರತವನ್ನು ಪಾಕಿಸ್ತಾನಕ್ಕೆ ಅಡ ಇಡುವುದಕ್ಕೂ ಈ ಕಾಂಗ್ರೆಸ್ಸಿಗರು ಹಿಂಜರಿಯುವುದಿಲ್ಲ ಎಂದು ಕಿಡಿಕಾರಿದ್ದಾರೆ. ಪಾಕಿಸ್ತಾನದ ಆಟಗಾರರನ್ನು ಐಪಿಎಲ್ ನಲ್ಲಿ ಆಡಿಸುವುದಕ್ಕೆ ಸಂಬಂಧಿಸಿದಂತೆ ಶಾರೂಕ್ ಖಾನ್ ಮಾತನಾಡಿದ್ದೆ, ಈ ಎಲ್ಲ ವಿವಾದಗಳಿಗೆ ಕಾರಣವಾಗಿದೆ.