ನಕ್ಸಲ್ ಹಾಗೂ ಉಗ್ರರ ದಮನಕ್ಕೆ ಶಪಥ

ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿರುವ ಉಗ್ರರನ್ನು ದಮನ ಮಾಡಲು ಸರಕಾರ ಎಲ್ಲಾ ಅಗತ್ಯ ಕ್ರಮ ಕೈಗೊಂಡಿದ್ದರೂ ರಾಜ್ಯಕ್ಕೆ ಕೇಂದ್ರದ ಹೆಚ್ಚಿನ ನೆರವು ಅಗತ್ಯ ಎಂದು ಯಡಿಯೂರಪ್ಪ ಹೇಳಿದರು. ಭವಿಷ್ಯದಲ್ಲಿ ಉಗ್ರರ ದಾಳಿಗಳನ್ನು ಹತ್ತಿಕ್ಕಲು ಹಾಗೂ ಆಂತರಿಕ ಭದ್ರತೆಯನ್ನು ಸದೃಢಗೊಳಿಸಲು ಹೆಚ್ಚಿನ ನೆರವು ನೀಡುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದರು.
ಭಯೋತ್ಪಾದನೆ, ಆರ್ಥಿಕ ಭದ್ರತೆ, ಪರಮಾಣು ಭದ್ರತೆ, ಸೈಬರ್ ಭದ್ರತೆ ಸೇರಿದಂತೆ ದೇಶ ಹಲವು ವಲಯಗಳಲ್ಲಿ ಆಂತರಿಕ ಭದ್ರತೆಯ ಸವಾಲುಗಳನ್ನು ಎದುರಿಸುತ್ತಿದ್ದು ಕರ್ನಾಟಕ ಆಂತರಿಕ ಭದ್ರತೆಯ ಸವಾಲುಗಳನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಎದುರಿಸಲು ವಿಶೇಷ ವಿಭಾಗವನ್ನೇ ಆರಂಭಿಸಿದೆ ಎಂದರು.
ನಕ್ಸಲ್ ಹಾವಳಿ ಹಾಗೂ ಭಯೋತ್ಪಾದನೆಯನ್ನು ತಡೆಗಟ್ಟಲು ಕೇಂದ್ರದ ನೆರವಿನಿಂದ ಕಮಾಂಡೋ ತರಬೇತಿ ಕೇಂದ್ರವನ್ನು ರು.20 ಕೋಟಿ ವೆಚ್ಚದಲ್ಲಿ ಆರಂಭಿಸಲಾಗುವುದು ಎಂದು ಹೇಳಿದರು. ಪೊಲೀಸ್ ಆಧುನೀಕರಣಕ್ಕೆ ಹೆಚ್ಚಿನ ನೆರವು ನೀಡಬೇಕೆಂದು ಅವರು ಕೇಂದ್ರವನ್ನು ಒತ್ತಾಯಿಸಿದರು.
ರಾಜ್ಯದಲ್ಲಿ ನಕ್ಸಲರ ಹಾವಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲಾಗಿದೆ. ಈ ವರ್ಷ 44 ಮಂದಿ ನಕ್ಸಲ್ ಹಾಗೂ ಅವರ ಬೆಂಬಲಿಗರನ್ನು ಬಂಧಿಸಲಾಗಿದೆ ಎಂದು ಯಡಿಯೂರಪ್ಪ ಸಭೆಗೆ ಮಾಹಿತಿ ನೀಡಿದರು.
ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು(ಆರ್ ಎ ಎಫ್) ಕರ್ನಾಟಕದಲ್ಲೇ ಸ್ಥಾಪಿಸುವಂತೆ ಒತ್ತಾಯಿಸಿದ ಅವರು, ಕ್ಷಿಪ್ರ ಕಾರ್ಯಾಚರಣೆಯ ಮುಖ್ಯ ಕಚೇರಿಯನ್ನು ಬೆಂಗಳೂರಿನ ಯಲಹಂಕದಿಂದ ತಮಿಳುನಾಡಿನ ಕೊಯಮತ್ತೂರಿಗೆ ವರ್ಗಾಯಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಆರ್ ಎ ಎಫ್ ಸೇವೆ ಪಡೆಯಲು ಅಡ್ಡಿಯಾಗಿದ್ದು ಆರ್ ಎ ಎಫ್ ನ ಒಂದು ಪಡೆಯನ್ನುಬೆಂಗಳೂರಿನಲ್ಲಿ ಸ್ಥಾಪಿಸುವಂತೆ ಸಿಎಂ ಕೇಂದ್ರಕ್ಕೆ ಒತ್ತಾಯಿಸಿದರು.












Click it and Unblock the Notifications